ಕುಮಟಾ : ತಾಲೂಕಿನ ಮೂರೂರು ಗ್ರಾಮದಲ್ಲಿ ದೈವಸ್ಥಾನ ಹಾಗೂ ಅರಣ್ಯ ಭೂಮಿ ಒತ್ತುವರಿ ಮಾಡಲು ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಿಜೆಪಿ ಕುಮಟಾ ಮಂಡಲ ಅಧ್ಯಕ್ಷ ಜಿ.ಐ. ಹೆಗಡೆ ವಿರುದ್ಧ ಜನರು ತಿರುಗಿಬಿದ್ದಿದ್ದಾರೆ.
ಮೂರೂರು ಗ್ರಾಮದ ಸರ್ವೆ ನಂ. 191ರಲ್ಲಿ ಇರುವ “ಜಟಕ” ದೇವರ ದೈವಸ್ಥಾನವನ್ನು ಸುತ್ತಮುತ್ತಲಿನ 700ಕ್ಕೂ ಹೆಚ್ಚು ಕುಟುಂಬಗಳು ಆರಾಧಿಸುತ್ತಿವೆ. ಈ ಪ್ರದೇಶ ಬಹುತೇಕ ಅರಣ್ಯ ವ್ಯಾಪ್ತಿಗೆ ಸೇರಿದ್ದು, ಪರಿಸರದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ವಿವಾದಿತ ಪ್ರದೇಶದ ಪಕ್ಕದಲ್ಲಿರುವ ಮೂರು ಎಕರೆ ಖಾಸಗಿ ಭೂಮಿಗೆ ದತ್ತಾತ್ರೇಯ ಭಟ್ಟ ಮಾಲೀಕರಾಗಿದ್ದು, ಆ ಭೂಮಿಯ ಜೊತೆಗೆ ಪಕ್ಕದ ಅರಣ್ಯ ಪ್ರದೇಶವನ್ನು ಸೇರಿಸಿ ಕಪೌಂಡ್ ನಿರ್ಮಿಸಲು ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈ ಕೆಲಸಕ್ಕೆ ಮುಂದಾದ ಜಿ.ಐ. ಹೆಗಡೆ ಅವರನ್ನು ಸ್ಥಳೀಯರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿ ಕಪೌಂಡ್ ನಿರ್ಮಾಣಕ್ಕಾಗಿ ತರಲಾಗಿದ್ದ ಕಲ್ಲುಗಳು ಇನ್ನೂ ಬಿದ್ದಿವೆ.
ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಒಟ್ಟಾಗಿ ಈ ಒತ್ತುವರಿ ಯತ್ನವನ್ನು ತಡೆದಿದ್ದು, “ದೈವಸ್ಥಾನದ ಜಾಗವನ್ನು ಯಾವುದೇ ಕಾರಣಕ್ಕೂ ಕಬಳಿಸಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ, 2021ರಲ್ಲಿ ಅರಣ್ಯ ಇಲಾಖೆ ಮತ್ತು ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ, ಈ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ದಾಖಲೆಗಳಿವೆ. ಆದಾಗ್ಯೂ, ರಾಜಕೀಯ ಒತ್ತಡದ ಮೂಲಕ ಸರ್ವೆ ಮತ್ತು ಗಡಿ ಗುರುತಿಸುವಿಕೆ ನಡೆಸಿ ಭೂಮಿ ಕಬಳಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದು, ಒತ್ತುವರಿ ಯತ್ನ ಮುಂದುವರೆದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

