ಶಿರಸಿ-ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೋಸಿನ್ ಯಾನೆ ಇಮ್ತಿಯಾಜ್ ತಂದೆ ಅಬ್ದುಲ್ ಶಕೂರ್ ಹೊನ್ನಾವರ ಬಂಧಿತ ವ್ಯಕ್ತಿ.
2019ರಲ್ಲಿ ಶಿರಸಿಯಲ್ಲಿ ಅಸ್ಲಾಂ ಎಂಬಾತರ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿಗಳ ಪೈಕಿ ಮೋಸಿನ್ ಸಹ ಒಬ್ಬರಾಗಿದ್ದರು. ಇದರೊಂದಿಗೆ ಬೆಂಗಳೂರಿನ ಡಿಜೆ ಹಳ್ಳಿ ಗಲಬೆಯಲ್ಲಿ ಸಹ ಮೋಸಿನ್ ಪ್ರಮುಖ ಆರೋಪಿಯಾಗಿದ್ದರು. ಭಯೋತ್ಪಾದನೆ ಪ್ರಕರಣದಲ್ಲಿ ಸಹ ಮೋಸಿನ್ ಭಾಗಿಯಾಗಿದ್ದು, ಅನೇಕ ಬಾರಿ ಆತನ ಕುಟುಂಬದವರೇ ರಕ್ಷಣೆ ನೀಡಿದ್ದರು.
ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮೋಸಿನ್’ನನ್ನು ಬಂಧಿಸಿದ್ದು ರಕ್ಷಣೆ ನೀಡಿದ್ದ ಅವರ ಕುಟುಂಬದವರ ವಿಚಾರಣೆಯನ್ನು ಮುಂದುವರೆಸಿದ್ದಾರೆ. ತಲೆಮರೆಸಿಕೊಂಡಿದ್ದ ಮೋಸಿನ್’ನನ್ನು ಪೊಲೀಸರು ವಿಜಯಪುರದ ಸಿಂದಗಿಯಲ್ಲಿ ಬಂಧಿಸಿದ್ದಾರೆ. ಸದ್ಯ ಕೊಲೆ ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದರೂ ರಾಷ್ಟಿಯ ತನಿಖಾ ದಳದವರು ಮೋಸಿನ್’ನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ವರ್ಷಕ್ಕೆ ಒಂದು ಮಗು ಮಾಡುವ ಖಯಾಲಿ!
ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಪಿಎಫ್ಐ ಸಂಘಟನೆಗೂ ಮೋಸಿನ್ ಅಧ್ಯಕ್ಷನಾಗಿದ್ದ. 2022ರಲ್ಲಿ ನ್ಯಾಯಾಲಯದಿಂದ ಜಾಮೀನುಪಡೆದ ಆತ ಮತ್ತೆ ಕೋರ್ಟಿನ ಕಡೆ ತಲೆ ಹಾಕಿರಲಿಲ್ಲ. ಪ್ರತಿ ವರ್ಷವೂ ಒಂದೊoದು ಮಗು ಹುಟ್ಟಿಸುತ್ತಿದ್ದ ಮೋಸಿನ್ ಇದೀಗ ಐದು ಮಕ್ಕಳ ತಂದೆ!
ಆತನ ವಿರುದ್ಧ ಭಯೋತ್ಪಾದನೆ ಸೇರಿ ಅನೇಕ ಆರೋಪಗಳಿದ್ದರೂ ಕುಟುಂಬದವರು ಅದನ್ನು ಸಹಿಸಿಕೊಂಡಿದ್ದರು. ಈ ಹಿನ್ನಲೆ ಮೋಸಿನ್ ಪತ್ನಿ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆತನ ಹಿನ್ನಲೆ ಅರಿತ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಉಗ್ರನನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. `ಕೊಲೆ, ಹಲ್ಲೆ ಸೇರಿ ಹಲವು ಪ್ರಕರಣದಲ್ಲಿ ಮೋಸಿನ್ ಆರೋಪಿ. ಬೆಂಗಳೂರಿನ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಬೆಯಲ್ಲಿ ಸಹ ಭಾಗಿಯಾಗಿದ್ದ. ಸಾಕಷ್ಟು ಬಾರಿ ಆತನ ಮನೆ ಮೇಲೆ ದಾಳಿ ನಡೆಸಿ ಹುಡುಕಿದರೂ ಸಿಕ್ಕಿರಲಿಲ್ಲ. ಇದೀಗ ಆತ ಸಿಕ್ಕಿ ಬಿದ್ದಿದ್ದು, ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.