ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಕರೆ
ನಾಗಮಂಗಲ. ನ:- 23 ಮನುಷ್ಯನಿಗೆ ಜೀವಿಸಲು ಗಾಳಿ ಮತ್ತು ನೀರು ಎಷ್ಟು ಮುಖ್ಯವೋ ಆರೋಗ್ಯಕರ ಆಹಾರವು ಅಷ್ಟೇ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ನೈಸರ್ಗಿಕವಾಗಿ ಸಿಗುವ ಆಹಾರದ ಸೇವನೆ ಆದಷ್ಟು ಮಾಡಬೇಕು ಎಂದು ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯೆ ಡಾ. ಅಖಿಲಾ ಅವರು ಹೇಳಿದರು.
ಅವರು ನಾಗಮಂಗಲ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಏರ್ಪಡಿಸಲಾದ “ಕುಕ್ ವಿಥೌಟ್ ಫೈಯರ್” (cook without fire) ಒಲೆ ಇಲ್ಲದೆ ಅಡುಗೆ ಮಾಡುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ದಿನಗಳಲ್ಲಿ ಸಮಯದ ಕೊರತೆ ಕಾರಣ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಫಾಸ್ಟ್ ಫುಡಗಳ ಸೇವನೆ ಹೆಚ್ಚುತ್ತಿದೆ, ಜನರಲ್ಲಿ ಅನೇಕ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಜನರು ತಮ್ಮ ಆಹಾರ ಪದ್ಧತಿಯನ್ನು ಬದಲಿಸುವುದರಿಂದ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಪೂರಕ ಆಹಾರಗಳಿಗಿಂತ ನೈಸರ್ಗಿಕವಾಗಿ ಸಿಗುವ ಆಹಾರವನ್ನೇ ಹೆಚ್ಚು ಸೇವಿಸಿ ಎಂದು ಹೇಳುತ್ತಾ ಇವತ್ತಿನ ಸ್ಪರ್ಧಾ ಕಾರ್ಯಕ್ರಮದಲ್ಲಿ ತಯಾರಿಸಿದ ಆರೋಗ್ಯಕರವಾದ ಆಹಾರವನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಸೇವಿಸುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಹಣ್ಣು, ತರಕಾರಿ ರಸಗಳು, ವಿಧವಿಧವಾದ ಸಲಾಡ್ಗಳು, ಆರೋಗ್ಯಕರ ಉಂಡೆಗಳು ಮತ್ತು ಸ್ಯಾಂಡ್ವಿಚ್ ಗಳನ್ನು ಬೆಂಕಿಯನ್ನು ಉಪಯೋಗಿಸದೆ ತಯಾರು ಮಾಡಿದರು.
ಈ ಸಂದರ್ಭದಲ್ಲಿ ನಾಗೇಶ, ಪ್ರಗತಿ ಉದಯ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.