ಕಲೆ ಎಂಬ ಕಲ್ಪವೃಕ್ಷ ಸಿದ್ಧಿ ಸಾಧಿಸಲು ಗುರು ಮಾರ್ಗ ದರ್ಶನದ ಗುರಿ ಅಗತ್ಯ :ಶ್ರೀ ನಿರ್ಮಲ ನಂದ ನಾಥ ಸ್ವಾಮೀಜಿ
ನಾಗಮಂಗಲ.ನ:-21 ಕಲ್ಪವೃಕ್ಷದ ಫಲವನ್ನು ಪಡೆಯುವವರು ಮರದ ಕೆಳಗಿರಬೇಕು ಹಾಗೆಯೇ ಗುರು ಕರುಣೆ ಸಿದ್ಧಿಸಬೇಕಾದರೂ ಪ್ರಣಿಪಾತ ಸೇವೆಯಿಂದ ಸಾಧ್ಯ ಎಂದು ಆದಿಚುಂಚನಗಿರಿ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಶ್ರೀಗಳು ನುಡಿದರು.
ಅವರಿಂದು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಆಯೋಜಿಸಿದ್ದ 2 ದಿನಗಳ “ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವ” ರಜತ ಮಹೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉಪಯೋಗಿಸದೆ ಇರುವ ವಸ್ತು ಯಾವುದೂ ಬೆಳೆಯುವುದಿಲ್ಲ, ಜ್ಞಾನವು ಹಾಗೆಯೇ. ಬೇರೆ ಬೇರೆಯದೇ ಆದ ನೆನಪು ಕಾವ್ಯ ವಿಜ್ಞಾನ ತರ್ಕ ಎಲ್ಲವನ್ನೂ ಧ್ಯಾನಿಸಿ ಪಡೆಯುವುದು ನಿಮ್ಮೆಲ್ಲರ ಮೊದಲ ಕರ್ತವ್ಯವಾಗಲಿ ಎಂದರು. 2014 ರಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು ಆರಂಭಿಸಿದ ಚುಂಚಾದ್ರಿ ಕಲೋತ್ಸವವೆಂಬ ಮಕ್ಕಳ ಕಲರವ 25 ವರ್ಷಗಳು ಸಂಪನ್ನಗೊಂಡು ಸಂಭ್ರಮದ ಬೆಳ್ಳಿ ಹಬ್ಬವಾದ ಹಿರಿಮೆಗೆ ಶ್ರೀಗಳು ಹಾಕಿಕೊಟ್ಟ ಭದ್ರ ಬುನಾದಿ ಎಂಬುದನ್ನು ನೆನಪಿಸಿಕೊಂಡರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ ಎ ಶೇಖರ್ ಮಾತನಾಡಿ ಸಂಗೀತ ನೃತ್ಯಗಳು ಆದಿ ಮಾನವರ ಕಾಲದಿಂದಲೂ ಹಾಗೂ ಪ್ರಾಣಿ ಪಕ್ಷಿ ಸಂಕುಲದಲ್ಲಿಯೂ ಇದೆ, ಆದರೆ ಮಾನವ ಅದಕ್ಕೆ ಲಲಿತಕಲೆಯಾಗಿ ಸ್ಥಾಪಿಸಿ ವೈಜ್ಞಾನಿಕ ಸ್ಪರ್ಶವನ್ನು ನೀಡಿದ್ದಾನೆ ಎಂದು ಬಣ್ಣಿಸಿದರು.
ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ ಕು. ರೂಪಿಕಾ ಮಾತನಾಡಿ ಮನುಷ್ಯನ ಬದುಕಿಗೆ ಕಲೆ ಎಂಬುದು ಬಹಳ ಮುಖ್ಯ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಿಮಗೆ ಪಠ್ಯದ ಜೊತೆಗೆ ಪಠ್ಯೇತರವಿಭಾಗದಲ್ಲೂ ಮಾರ್ಗದರ್ಶನ ನೀಡಿ ಬೆಳೆಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಎಎಸ್ ನಲ್ಲಿ ದೇಶಕ್ಕೇ ಪ್ರಥಮ ರಾಂಕ್ ಗಳಿಸಿ ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ. ನಂದಿನಿ ಮಾತನಾಡಿ ಅವಕಾಶಗಳು ಹಲವು ರೀತಿಯಲ್ಲಿ ಬರುತ್ತವೆ, ಆದರೆ ಸಮರ್ಪಕವಾಗಿ ಬಳಸಿಕೊಂಡು ಶ್ರದ್ಧೆಯಿಂದ ಶ್ರಮ ವಹಿಸಿದರೆ ಮಾತ್ರ ಶ್ರೇಷ್ಠ ಗುರಿ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಪ್ರೇರೇಪಣಾ ನುಡಿಗಳನ್ನಾಡಿದರು.
ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ನಾಗಮಂಗಲ ತಹಸಿಲ್ದಾರ್ ಶ್ರೀ ಎನ್ ಎಲ್ ನಂದೀಶ್ ಮಾತನಾಡಿದರು..
ಎರಡು ದಿನಗಳ ಕಾಲ ನಡೆಯುವ ಈ ಕಲೋತ್ಸವದಲ್ಲಿ 2600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 30 ಮಂದಿ ತೀರ್ಪುಗಾರರು ಭಾಗವಹಿಸುತ್ತಿರುವುದು ವಿಶೇಷವೆನಿಸಿದೆ.
ಸಮಾರಂಭದ ಕಾರ್ಯಕ್ರಮದಲ್ಲಿ ಶಿಕ್ಷಣ ಟ್ರಸ್ಟ್ ನ ಆಡಳಿತ ಅಧಿಕಾರಿ ಡಾ. ಎಂ ಟಿ.ಶಿವರಾಮು,ಮುಖ್ಯೋಪಾಧ್ಯಾಯ ಎಂ ಎನ್ ಮಂಜುನಾಥ್ ಗಣ್ಯರು ಹಾಜರಿದ್ದರು
ದೇವಲಾಪುರ ಜಗದೀಶ್ ನಾಗಮಂಗಲ