*ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿವಂಗತ ವಿ.ಎಂ.ನಾಯ್ಕ ಅವರಿಗೆ ಭಾವಪೂರ್ಣ ನುಡಿನಮನ*
ಭಟ್ಕಳ: ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ತಹಸೀಲ್ದಾರ, ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೂ ಆಗಿದ್ದ ದಿವಂಗತ ವಿ. ಎಂ. ನಾಯ್ಕ, ಚಳ್ಳಸರ ಮನೆ ಚಿತ್ರಾಪುರ, ಶಿರಾಲಿ, ಅವರಿಗೆ ಭಾವಾಪೂರ್ಣ ನುಡಿನಮನವನ್ನ ಇಲ್ಲಿನ ಶಿರಾಲಿ ಯ ಜನತಾ ವಿದ್ಯಾಲಯದಲ್ಲಿ ಸಲ್ಲಿಸಲಾಯಿತು.
ದಿ.ವಿ.ಎಂ.ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನ ಪ್ರಾರಂಭಿಸಲಾಯಿತು. ಹಿರಿಯ ಸಾಹಿತಿ ಡಾ.ಆರ್.ವಿ.ಸರಾಫ್ ಮಾತನಾಡಿ ವಿ.ಎಂ.ನಾಯ್ಕ ಅವರದು ನೇರ ನಡೆ ನುಡಿ ಹೊಂದಿದ್ದ ಸಾಮಾಜಿಕ ಕಳಕಳಿಯ ವ್ಯಕ್ತಿತ್ವ. ಮಾನವೀಯ ಮೌಲ್ಯ ಹೊಂದಿರುವ ನುಡಿದಂತೆ ನಡೆದ ಅಪರೂಪದ ವ್ಯಕ್ತಿ ಮಾತ್ರವಲ್ಲ ಸಾಹಿತ್ಯಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಅವರ ಬದುಕಿನ ಆದರ್ಶ ಎಲ್ಲರಿಗೂ ಮಾದರಿ ಎಂದು ನುಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪೀ.ಆರ್.ನಾಯ್ಕ ಮಾತನಾಡಿ ಸಾಹಿತ್ಯ, ಜಾನಪದ ಮತ್ತು ಸಾಂಸ್ಕೃತಿಕ ಆಸಕ್ತಿಯುಳ್ಳ ಸಜ್ಜನರರಾದ ವಿ.ಎಂ.ನಾಯ್ಕ ಅವರು ಜಾನಪದ ಗೀತೆ, ಮದುವೆಯ ಹಾಡುಗಳನ್ನು ರಾಗಬದ್ಧವಾಗಿ ಹಾಡುತ್ತಿದ್ದರು.ಎಲ್ಲರೊಂದಿಗೆ ಬೆರೆತು ಉಪಕಾರಿಯಾಗಿ ಬದುಕಿ ಬಾಳಿದ್ದಲ್ಲದೆ ಅಧಿಕಾರಿಯಾಗಿ ಜನಾನುರಾಗಿಯಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರೀತಿ ಗಳಿಸಿದವರು ಎಂದರು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿ.ಎಂ.ನಾಯ್ಕ ಅವರ ಕುರಿತು ಎಲ್ಲ ಗಣ್ಯ ಮಹನೀಯರ ಮಾತುಗಳಿಂದ ಅವರ ಮೇರು ವ್ಯಕ್ತಿತ್ವದ ಪರಿಚಯವಾಗಿ ಅವರೆಡೆಗೆ ಮತ್ತಷ್ಟು ಗೌರವ ಮೂಡುವಂತಾಗಿದೆ. ಅವರ ಸಾಮಾಜಿಕ ಸೇವಾ ಕಾರ್ಯದಿಂದಾಗಿಯೆ ಚಿತ್ರಾಪುರದಲ್ಲಿ ನಡೆದ ಭಟ್ಕಳ ತಾಲೂಕಾ ಒಂಭತ್ತನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿ ಆಯ್ಕೆಯಾಗಿದ್ದರು. ಅವರ ಆದರ್ಶ, ಜೀವನ ಮೌಲ್ಯಗಳು ಇಂದಿನ ಯುವಜನಾಂಗಕ್ಕೆ ಮಾದರಿ ಎಂದು ನುಡಿದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಅರ್ಚನಾ ಯು ಮಾತನಾಡಿ ಶಿಕ್ಷಣ ಹಾಗೂ ಸಿದ್ಧಾರ್ಥ ಸಂಸ್ಥೆಯ ಕುರಿತಾದ ಅವರ ಕಳಕಳಿಯ ಕುರಿತು ಮಾತನಾಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತಿದ್ದ ಸಾಹಿತಿ ನಾರಾಯಣ ಯಾಜಿ, ಮಾನಾಸುತ ಶಂಭು ಹೆಗಡೆ, ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮೃತ್, ಎಂ.ಪೀ. ಬಂಡಾರಿ, ನಿವೃತ್ತ ಶಿಕ್ಷಕ ಶಂಕರ್ ನಾಯ್ಕ, ಎಂ.ಡಿ.ನಾಯ್ಕ, ವಿ.ಎಂ ನಾಯ್ಕ ಅವರ ಬಂಧು ವರ್ಗದ ಪ್ರಭಾಕರ್ ನಾಯ್ಕ,ನಂದನ್ ನಾಯ್ಕ, ಮಾಂಜು ನಾಯ್ಕ ವಿ.ಎಂ.ನಾಯ್ಕ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ್ ಶೇಟ್ ವಿ.ಎಂ.ನಾಯ್ಕ ಅವರ ವೃತ್ತಿ ಜೀವನದ ನೆನಪುಗಳ ‘ನೆನಪಿನಾಳದಿಂದ ‘ ಕೃತಿಯ ವಿಶೇಷ ಸಂಗತಿಗಳನ್ನು ಉಲ್ಲೇಖಿಸಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ ವಂದಿಸಿದರು. ಕಾರ್ಯಕ್ರಮ ಶಿಕ್ಷಕ ಉಮೇಶ್ ಕೆರೆಕಟ್ಟೆ, ಪಾಂಡುರಂಗ ನಾಯ್ಕ, ಶಂಕರ್ ನಾಯ್ಕ ಬೆಟಕೂರ್, ಲಕ್ಷ್ಮಣ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.