ಹಿರಿಯ ಸಾಹಿತಿ ವಿ.ಗ.ನಾಯಕರಿಂದ ಉಮೇಶ ಮುಂಡಳ್ಳಿಯವರ ತಿಂಗಳ ಬೆಳಕು ಸಂಕಲನ ಬಿಡುಗಡೆ
ಕುಮಟಾ- ಗದ್ಯ ಲೇಖನಗಳು ಮಾಡದ ಕಾರ್ಯವನ್ನು ಕೆಲವೊಮ್ನೆ ಹನಿಕವನಗಳು ಮಾಡಬಲ್ಲವು.ಅಂತಹ ಶಕ್ತಿ ಹನಿಕವಿತೆಗಳಿದೆ ಎಂದು ನಾಡಿನ ಹಿರಿಯ ಕವಿ ಜನಪದ ವಿದ್ವಾಂಸ ವಿ.ಗ.ನಾಯಕ ನುಡಿದರು.
ಅವರು ರವಿವಾರ ಕುಮಟಾದ ಹಳೆಬಸ್ ಸ್ಟ್ಯಾಂಡ್ ಸಮೀಪ ಇರುವ ಪ್ರಭುದಾಮ ದಲ್ಲಿ ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿ ಅವರು ಬರೆದ ಶ್ರೀ ಶರಣು ದುರ್ಗಾ ಪ್ರಕಾಶನದ ಹನ್ನೊಂದನೇ ಪ್ರಕಟಣೆ “ತಿಂಗಳ ಬೆಳಕು ” ಹನಿ ಕವನಗಳ ಸಂಕಲವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಹಿತ್ಯಕವಾಗಿ ತೊಡಗಿಸಿಕೊಳ್ಳುವವರ, ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದ್ದು ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಬರೆಯುವ ಕಡೆ ಆಸಕ್ತಿ ಹುಟ್ಟಿಸುವ ಕಾರ್ಯ ಚಟುವಟಿಕೆಗಳ ಅನಿವಾರ್ಯತೆ ಇದೆ ಎಂದರು.
ಚಂದಿರನನ್ನು ಸಂಕೇತವಾಗಿ ಇಟ್ಟಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಮುಂಡಳ್ಳಿ ಅವರು ಪ್ರತಿ ನಿತ್ಯವು ಬರೆದು ಹಂಚಿಕೊಳ್ಳುತ್ತಿದ್ದ ನೂರಕ್ಕೂ ಹೆಚ್ಚಿನ ಹನಿ ಕವಿತೆಗಳನ್ನು ಒಳಗೊಂಡ ತಿಂಗಳ ಬೆಳಕು ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಉಪಸಂಪಾದಕಿಯಾಗಿದ್ದ ದಿವಂಗತ ಸೀತಾಲಕ್ಷ್ಮೀ ಕರ್ಕಿಕೋಡಿಯವರಿಗೆ ಅರ್ಪಿಸಲಾಗಿದೆ.
ಈ ಸಂದರ್ಭದಲ್ಲಿ ವಿ.ಗ.ನಾಯಕ ಅವರ ಪತ್ನಿಯವರು ಇದ್ದರು, ಹಾಗೂ ಕವಯಿತ್ರಿ ರೇಷ್ಮಾ ಉಮೇಶ ,ನಿನಾದ ಹಾಗೂ ಉತ್ಥಾನ ಜೊತೆ ಇದ್ದರು. ಇದೇ ವೇಳೆ ವಿ.ಗ.ನಾಯಕ ಅವರು ತಮ್ಮ ಸಂಗ್ರಹದಲ್ಲಿದ್ದ ಅಮೂಲ್ಯ ವಾದ ನೂರು ಪುಸ್ತಕಗಳನ್ನು ನಿನಾದ ಸಾಹಿತ್ಯ ಸಂಗೀತ ಸಂಚಯಕ್ಕಾಗಿ ಉಮೇಶ ಮುಂಡಳ್ಳಿ ದಂಪತಿಗಳಿಗೆ ನೀಡಿ ಹರಸಿದರು.