ಭಟ್ಕಳ: ಉತ್ತರ ಕನ್ನಡ ಜಿಲ್ಲೆಗೆ ಬಂದು ವರ್ಷ ಕಳೆದರೂ ಅರ್ಥವಾಗದ ವ್ಯಕ್ತಿತ್ವ, ಹೀಗೆ ಇರಬಹುದಾ ಎನ್ನುವುದರಷ್ಟರಲ್ಲಿ,ಹಿಗಲ್ಲ ಎನ್ನುವಂತೆ ಬಾಸವಾಗುವ ನಮ್ಮ ಉತ್ತರ ಕನ್ನಡ ಕಂಡ ಕನ್ಫ್ಯೂಸಿಂಗ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ ನಾರಾಯಣ್ ಇಲೆಕ್ಟ್ರಾನಿಕ್ ಸಿಟಿ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಹೊಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕಂಡಂತೆ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತ ಮನಗೆದ್ದವರು ಶಿವಪ್ರಕಾಶ್ ದೇವರಾಜು ನಂತರದಲ್ಲಿ ಡೈನಾಮಿಕ್ ಲೇಡಿ ಸುಮನ್ ಡಿ ಪೆನ್ನೇಕರ್ ಅದರಂತೆಯೇ ಮತ್ತೊಬ್ಬ ಜನರೊಡನೆ ಬೇರೆತು ತನ್ನದೆಯಾದ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್. ಎಷ್ಟೇ ಒತ್ತಡವಿರಲಿ,ಅದೆಷ್ಟೇ ಕೆಲಸವಿರಲಿ ಎಂ ನಾರಾಯಣ್ ಮಾತ್ರ ದಣಿಯದೆ ಜನಸೇವೆಯಲ್ಲಿ ಮಗ್ನರಾಗಿರುತಿದ್ದರು.
ಅದೆಷ್ಟೋ ಸಿಬ್ಬಂದಿಗಳಿಗೆ ಒಂದು ಬಾರಿ ಗದರಿದರೆ ಮತ್ತೊಂದು ಬಾರಿ ಹೆಗಲಮೇಲೆ ಕೈ ಹಾಕಿ ಪ್ರಶಂಸಿಸುವ ಎಸ್ಪಿ ವರ್ಗಾವಣೆ ಯಾವಾಗ ಅಂತ ಕೆಲವರು ಯೋಚಿಸುತ್ತಿದ್ದರೆ ಮತ್ತೊಂದು ಬಾರಿ ಇವರೇ ಇರಲಿ ಎನ್ನುವ ಮಾತು. ಅಂತೂ ಇಲ್ಲಿಯವರೆಗೂ ಅವರೇನು ಅಂತ ಅರ್ಥ ಮಾಡಿಕೊಳ್ಳುವರಷ್ಟರಲ್ಲಿ ಜಿಲ್ಲೆಯಲ್ಲಿ ನಡೆದ ಘನಘೋರ ಘಟನೆಗಳಲ್ಲಿಯ ಚಾಕಚಕ್ಯತೆಯ ನಿರ್ಣಯ ಹಾಗೂ ಕರ್ತವ್ಯವಂತೂ ಜನಮನ್ನಣೆ ಗಳಿಸಿದೆ.
ಹೌದು.. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಉದ್ದನೆಯ ಗಮ್ ಬೂಟನ್ನು ಧರಿಸಿ ಸಾಮಾನ್ಯವಾಗಿ ತಾನೊಬ್ಬ ಕೆಲಸಗಾರನಂತೆ ಅಂದರೆ ಒಬ್ಬ ಪೊಲೀಸ್ ಪೇದೆ ಮಾಡುವ ಕೆಲಸವನ್ನು ಸಹ ಯಾವುದೇ ಅಡ್ಡಿ ಅಹಂ ಇಲ್ಲದೆ ಕಾರ್ಯ ನಿರ್ವಹಿಸಿ ಕಾರ್ಯಾಚರಣೆಯನ್ನು ಒಂದು ಹಂತಕ್ಕೆ ತಲುಪಿಸಿದ್ದು ಮಾತ್ರ ಉತ್ತರ ಕನ್ನಡಿಗರು ಎಂದು ಮರೆಯದ ವಿಚಾರವಾಗಿದೆ. ಅದರಂತೆಯೇ ಹಣಕೋಣ ಉದ್ಯಮಿ ಹತ್ಯೆ ಪ್ರಕರಣದಲ್ಲಿ ಸಿಬ್ಬಂದಿಗಳಿಗೆ ನೀಡಿದ ಮಾರ್ಗದರ್ಶನದಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಹೆಡೆಮುರಿಕಟ್ಟಿದ ಖ್ಯಾತಿ ಇವರದ್ದು,ಹಾಗೆಯೇ ಮುಂಡಗೋಡದಲ್ಲಿ ದರೋಡೆಕೋರರ ಬೇಟೆ,ಗೋ ಕಳ್ಳರಿಗೆ ಬೆಂಡೆತ್ತಿದ ರೀತಿ,ಅಂಕೋಲೆಯ ಕೋಟಿ ದರೋಡೆಕೋರರಿಗೆ ಬಿಸಿ ಮುಟ್ಟಿಸಿದ ರೀತಿ,ಕಾರವಾರದ ನಗರಸಭೆ ಸದಸ್ಯನ ಕೊಲೆ ಆರೋಪಿಗಳ ಬಲೆಗೆ ತೋರಿದ ಜಾಣ್ಮೆಗೆ ಉತ್ತರ ಕನ್ನಡ ಮಂದಿಯ ಹಾಟ್ ಫೇವರಿಟ್ ಎಸ್ಪಿಯಾಗಿ ಗುರುತಿಸಿಕೊಂಡಿದ್ದಾರೆ.
ತುಕ್ಕು ಹಿಡಿದಿದ್ದ ಪೋಲಿಸ್ ರಿವಾಲ್ವರ್ ಗೆ ವೈಲಿಂಗ್ ಅಂಡ್ ಗ್ರಿಸಿಂಗ್.
ಪೊಲೀಸರ ರಿವಾಲ್ವರ್ ಗಳಿಗೆ ತುಕ್ಕು ಹಿಡಿದಿದ್ದವು,ಎಷ್ಟೇ ಸಂದಿಗ್ದ ಸ್ಥಿತಿಯಲ್ಲಿಯೂ ಸುಮ್ಮನಿದ್ದ ರಿವಾಲ್ವರ್ ಯಾವುದೇ ವಿಚಾರಣೆಗಳು ಎದುರಾಗುತ್ತದೆ ಎಂದು ಬೆದರದೆ ಅರೋಪಿಗಳಿಗೆ ತಕ್ಕ ಪಾಠ ಕಲಿಸಬೇಕು ಹಾಗೆಯೇ ಅಪರಾಧ ಪ್ರಕರಣಗಳನ್ನು ತಡೆಯಲು ಪಣ ತೊಟ್ಟ ಎಸ್ಪಿ ಎಂ ನಾರಾಯಣ ಮಾರ್ಗದರ್ಶನದಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಆರು ವಿವಿಧ ಪ್ರಕರಣಗಳ ಆರೋಪಿಗಳ ಕಾಲಿಗೆ ಗುಂಡು ಹಾರಿದ್ದು ಮಾತ್ರ ಸೈನಿಕರ ಬಂದುಕಿನಂತೆ ನಮ್ಮ ರಿವಾಲ್ವರ್ ಕೂಡ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟ ವರಿಷ್ಠಾಧಿಕಾರಿಯಾಗಿದ್ದಾರೆ.
ಬಡ್ಡಿ ಸಾಲ ದಂದೇಕೋರರ ಹುಟ್ಟಡಗಿಸಿದ ಕೀರ್ತಿ!
ಬಡ್ಡಿಸಾಲ ದಂದೇಕೋರರ ವಿರುದ್ಧ ಸಮರ ಸಾರಿದ್ದ ಎಸ್ಪಿ ಎಂ ನಾರಾಯಣ್ ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ದಂದೆಯಿಂದ ಸೊರಗಿಹೋಗಿದ್ದ ಜನಸಾಮಾನ್ಯರು ನಾರಾಯಣ ಜಪದಲ್ಲಿ ನಿರತರಾಗಿದ್ದಾರೆ. ಹಾಗೆಯೇ ದಂದೆ ನಡೆಸುವವರ ಮನೆಯ ಮೇಲೆ ಏಕಾಏಕಿ ದಾಳಿ ನಡೆಸಿ ಸಾಲಗಾರ ಒತ್ತಾಸೆಯಾಗಿ ಇಟ್ಟುಕೊಂಡಿದ್ದ ಚೆಕ್,ಜಮೀನು ಪತ್ರ ಮುಂತಾದವುಗಳನ್ನು ವಶಪಡಿಸಿಕೊಂಡು ದಂದೇಕೋರರ ಮೇಲೆ ಎಫ್ ಐ ಆರ್ ದಾಖಲಿಸಿ ಎಚ್ಚರಿಕೆ ನೀಡಿರುವುದು ಬಳಲಿ ಬೆಂಡಾಗಿದ್ದ ಜಿಲ್ಲೆಯ ಅನೇಕರು ನಿಟ್ಟುಸಿರುಬಿಟ್ಟಿದ್ದಾರೆ.ಮುಂದುವರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಎಚ್ಚರಿಕೆ ನೀಡುವ ಮೂಲಕ ಮೀಟರ್ ಬಡ್ಡಿ ದಂದೆಗೆ ಕಡಿವಾಣ ಹಾಕಿ ಸೈ ಎನಿಸಿಕೊಂಡಿದ್ದಾರೆ.
ಬಸವನ ನಾಡಿಬಲ್ಲಿ ಸಂಪೂರ್ಣ ವೈಶ್ಯಾವಾಟಿಕೆ ಬಂದ್ ಮಾಡಿಸಿದ್ದ ಎಂ ನಾರಾಯಣ್
ಬಸವನಬಾಗೇವಾಡಿ ಯಲ್ಲಿ 2009 ರಲ್ಲಿ ಪ್ರೊಬೆಶನರಿ ಡಿವೈಎಸ್ಪಿ ಆಗಿದ್ದ ಎಂ ನಾರಾಯಣ್ ನಿಡಗುಂದಿ ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ವೈಶ್ಯಾವಾಟಿಕೆಯನ್ನು ತಡೆಗಟ್ಟಲು ನಸುಕಿನ ಜಾವ ವಿಭಾಗದಲ್ಲಿಯ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಅನೈತಿಕ ದಂದೆಗೆ ಕಡಿವಾಣ ಹಾಕಿದ್ದರು. ಅಂದಿನ ಆ ದೃಢ ನಿರ್ದಾರದಿಂದ ಇಂದಿನವರೆಗೂ ವೈಶ್ಯಾವಾಟಿಕೆ ದಂದೆ ಸಂಪೂರ್ಣವಾಗಿ ನಾಶವಾಗಿದೆ ಎನ್ನಲಾಗಿದೆ.ಅದರಂತೆಯೇ ಆ ಬಾಗದಲ್ಲಿ ಹೆಚ್ಚಿದ್ದ ಅಶ್ಲೀಲ ಚಿತ್ರಗಳ ಸಿಡಿ ಮಾರಾಟ ದಂದೆಗೂ ಕಡಿವಾಣ ಹಾಕಲು ಅಂಗಡಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅವುಗಳನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಿದ ಕೀರ್ತಿ ಇವರದ್ದಾಗಿದೆ.
ಜನಸ್ನೇಹಿಯಾಗಿದ್ದ ಎಸ್ಪಿ ಇಲಾಖೆ ವಿಷಯಕ್ಕೆ ನೋ ಕಾಂಪ್ರಮೈಸ್!
ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಎಸ್ಪಿ ಎಂ ನಾರಾಯಣ್ ನೊಂದು ಬರುವ ಪ್ರತಿಯೊಬ್ಬರಿಗೂ ಸಲೀಸಾಗಿ ಸಿಗುವ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ತಮ್ಮ ಮನೆಯಲ್ಲಿ ಜಿಲ್ಲೆಯ ಕೆಲ ಕಲಾವಿದರನ್ನು ಕರೆಯಿಸಿ ಸನ್ಮಾನಿಸಿ ಮತ್ತಷ್ಟು ಪ್ರೋತ್ಸಾಹನೀಡುತ್ತಿದ್ದರು. ಇಲಾಖೆಯ ವಿಷಯಕ್ಕೆ ಸ್ವಲ್ಪವೂ ಬಗ್ಗದ ಅವರು ಎಂತಹ ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದ ಎಂ ನಾರಾಯಣ್ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೂ ಮಣಿಯದೆ ಅಕ್ರಮ ದಂದೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದರು.ಈಗ ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿ ಆಗಿ ಆಗಮಿಸಿರುವ ದೀಪನ್ ಅವರು ಜಿಲ್ಲೆಯಲ್ಲಿ ನಡೆಯುವ ಅಕ್ರಮ ದಂದೆಗಳನ್ನು ಯಾವ ರೀತಿ ಮಟ್ಟ ಹಾಕುತ್ತಾರೆ ಎಂದು ಕಾದು ನೋಡಬೇಕು.