
ಮುರುಡೇಶ್ವರ: ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಡಲ ತೀರಕ್ಕೆ ತೆರಳಿದ್ದ ಯುವಕನೊಬ್ಬ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತಕ್ಕೆ ತಲುಪಿದ್ದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. ಆದರೆ ಸ್ಥಳದಲ್ಲೇ ಇದ್ದ ಓಸಿಯನ್ ಅಡ್ವೆಂಚರ್ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಆತನ ಪ್ರಾಣ ಉಳಿದಿದೆ.

ಬೆಳಗಾವಿ ಮೂಲದ ಪ್ರಸನ್ನ ಎಂಬ ಯುವಕ ಶುಕ್ರವಾರ ಮುರುಡೇಶ್ವರಕ್ಕೆ ಭೇಟಿ ನೀಡಿದ್ದರು. ಒಂಟಿಯಾಗಿ ಸಂಚರಿಸುತ್ತಿದ್ದ ಅವರು ಬಳಿಕ ಸಮೀಪದ ಬಾರ್ನಲ್ಲಿ ಮದ್ಯ ಸೇವಿಸಿದ್ದರೆಂದು ತಿಳಿದು ಬಂದಿದೆ. ಮದ್ಯದ ನಶೆಯಲ್ಲಿಯೇ ಕಡಲ ತೀರಕ್ಕೆ ಬಂದ ಅವರು, ಸಮುದ್ರದ ಅಲೆಗಳ ತೀವ್ರತೆ ಬಗ್ಗೆ ಅರಿವಿಲ್ಲದೇ ನೀರಿನೊಳಗೆ ಇಳಿದಿದ್ದಾರೆ.ಈಜು ಬಾರದಿದ್ದರೂ ಆಳದ ಕಡೆಗೆ ಸಾಗುತ್ತಿದ್ದ ಪ್ರಸನ್ನ ಅವರನ್ನು ಅಲೆಯೊಂದು ಬಲವಾಗಿ ಅಪ್ಪಳಿಸಿದ್ದು, ಅದರ ರಭಸಕ್ಕೆ ಅವರು ನೀರಿನೊಳಗೆ ಕೊಚ್ಚಿ ಹೋಗಿದ್ದಾರೆ. ನೀರಿನಿಂದ ಹೊರಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಅವರನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಓಸಿಯನ್ ಅಡ್ವೆಂಚರ್ ಸಿಬ್ಬಂದಿ ಗಮನಿಸಿದ್ದಾರೆ.ತಕ್ಷಣವೇ ಸಿಬ್ಬಂದಿ ವಿಘ್ನೇಶ್ವರ ಹರಿಕಂತ್ರ ಅವರು ವಾಟರ್ ಬೈಕ್ ಮೂಲಕ ಸಮುದ್ರದೊಳಗೆ ತೆರಳಿ, ರಾಜೇಶ ಹರಿಕಂತ್ರ ಅವರ ಸಹಕಾರದೊಂದಿಗೆ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಸಾಕಷ್ಟು ಪ್ರಮಾಣದಲ್ಲಿ ನೀರು ನುಂಗಿದ್ದ ಪ್ರಸನ್ನ ಅವರನ್ನು ಸುರಕ್ಷಿತವಾಗಿ ಕರೆಯತಂದು ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಮಾಹಿತಿ ಪೊಲೀಸರಿಗೆ ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಯುವಕನಿಗೆ ಅಗತ್ಯ ಎಚ್ಚರಿಕೆ ನೀಡಿ ಮುಂದಿನ ಅನಾಹುತಗಳನ್ನು ತಪ್ಪಿಸಲು ಸೂಚಿಸಿ ಕಳುಹಿಸಿದ್ದಾರೆ.

