
ಹೊನ್ನಾವರ: ಶರಾವತಿ ನದಿಯ ಮೇಲಿನ ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗುಂಡಬಾಳ ಮುಟ್ಟದ ನಿವಾಸಿ ಜಾನ್ ಲೂಯಿಸ್ (61) ಎಂದು ಗುರುತಿಸಲಾಗಿದೆ.ನಿತ್ಯದಂತೆ ಮೀನು ವ್ಯಾಪಾರಕ್ಕಾಗಿ ಕಾಸರಕೋಡ್ಗೆ ತೆರಳಿದ್ದ ಅವರು, ಮೀನು ಖರೀದಿ ಮುಗಿಸಿ ಹೊನ್ನಾವರದ ಕಡೆಗೆ ಬೈಕ್ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸೇತುವೆ ಮೇಲೆ ಸಾಗುತ್ತಿದ್ದಾಗ ಟ್ಯಾಂಕರ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಕಾರಿನ ನಡುವೆ ಬೈಕ್ ಸವಾರ ಗಾಬರಿಗೊಂಡು ನಿಯಂತ್ರಣ ತಪ್ಪಿದ್ದಾನೆ ಎನ್ನಲಾಗಿದೆ.

ಅಪಘಾತ ಹೇಗೆ ನಡೆದಿದೆ?
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಗ್ಯಾಸ್ ತುಂಬಿಕೊಂಡು ಮಂಗಳೂರಿನಿಂದ ಗುಲಬರ್ಗಾ ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಅನ್ನು ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ, ಎದುರು ದಿಕ್ಕಿನಿಂದ ಕಾರು ಬಂದಿದ್ದರಿಂದ ಬೈಕ್ ಸವಾರ ಎಡಬದಿಗೆ ತಿರುಗಿದ್ದಾನೆ. ಈ ಸಂದರ್ಭದಲ್ಲಿ ಟ್ಯಾಂಕರ್ನ ಹಿಂಭಾಗದ ಚಕ್ರಕ್ಕೆ ಅವರ ಕಾಲು ಸಿಲುಕಿ ರಸ್ತೆಗೆ ಬಿದ್ದಿದ್ದು, ಟ್ಯಾಂಕರ್ ಹರಿದ ಪರಿಣಾಮ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸ್ ಕ್ರಮ
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಿರ್ಲಕ್ಷ್ಯ ಚಾಲನೆ ಹಾಗೂ ಅಸಮರ್ಪಕ ಓವರ್ಟೇಕ್ ಪ್ರಯತ್ನವೇ ಅಪಘಾತಕ್ಕೆ ಕಾರಣ ಎಂಬುದು ತಿಳಿದುಬಂದಿದೆ.
ಪುನರಾವರ್ತನೆಯಾಗುತ್ತಿರುವ ಅಪಘಾತಗಳ ಆತಂಕ
ಶರಾವತಿ ಸೇತುವೆಯಲ್ಲಿ ಅಪಘಾತಗಳು ಹೊಸದೇನಲ್ಲ. 2025ರ ಜನವರಿ ತಿಂಗಳ ಆರಂಭದಲ್ಲೇ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದರು. ಒಂದೇ ಅಪಘಾತದಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು.ಆ ಸಂದರ್ಭದಲ್ಲಿ ರಸ್ತೆ ದೀಪಗಳು, ಡಿವೈಡರ್ಗಳು, ಸಿಸಿ ಕ್ಯಾಮೆರಾ ಹಾಗೂ ಸೂಚನಾ ಫಲಕಗಳ ಅಳವಡಿಕೆಗೆ ಸ್ಥಳೀಯರು ಒತ್ತಾಯಿಸಿದ್ದರು. ಬಳಿಕ ದೀಪಗಳು ಹಾಗೂ ಡಿವೈಡರ್ಗಳನ್ನು ಅಳವಡಿಸಲಾದರೂ, ಕೆಲವು ದಿನಗಳಲ್ಲೇ ಭಾರೀ ವಾಹನಗಳ ಡಿಕ್ಕಿಯಿಂದ ಅವು ಹಾನಿಗೊಂಡಿವೆ. ಇದನ್ನು ಸರಿಪಡಿಸುವಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆ ಸಂಸ್ಥೆಗಳ ನಿರ್ಲಕ್ಷ್ಯ ಮುಂದುವರಿದಿರುವುದು ಅಪಘಾತಗಳ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಸ್ಥಳೀಯರ ಆಗ್ರಹ
ಹಳೆಯ ಶರಾವತಿ ಸೇತುವೆಯನ್ನು ಲಘು ವಾಹನಗಳ ಓಡಾಟಕ್ಕೆ ತೆರೆಯುವಂತೆ ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಇದರಿಂದ ನೂತನ ಸೇತುವೆಯ ಮೇಲಿನ ವಾಹನ ದಟ್ಟಣೆ ಕಡಿಮೆಯಾಗಿದ್ದು, ಅಪಘಾತಗಳನ್ನು ತಡೆಯಲು ಸಾಧ್ಯವೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆದರೆ ಈವರೆಗೆ ಆ ನಿರ್ಬಂಧ ತೆರವುಗೊಂಡಿಲ್ಲ.ಇನ್ನೊಂದೆಡೆ ತೂಗು ಸೇತುವೆ ನಿರ್ಮಾಣದ ಯೋಜನೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದ್ದು, ಹೆಚ್ಚಿನ ವೆಚ್ಚದ ಕಾರಣ ಯೋಜನೆ ಇನ್ನೂ ಸ್ಥಗಿತಗೊಂಡಿದೆ. ಪರಿಣಾಮವಾಗಿ ಒಂದೇ ಸೇತುವೆಯ ಮೇಲಿನ ಹೆಚ್ಚಿದ ವಾಹನ ಸಂಚಾರ ಜನರ ಪ್ರಾಣಕ್ಕೆ ಅಪಾಯವಾಗುತ್ತಿರುವುದು ವಿಪರ್ಯಾಸವಾಗಿದೆ.

