
ಸಿದ್ದಾಪುರ:ಟಿವಿ ಕ್ಯಾಮರಾ ಎದುರು ಭವಿಷ್ಯ ನುಡಿದು ಪರಿಚಿತ ಮುಖವಾಗಿದ್ದ ಕಮಲಾಕರ ಭಟ್ಟ ಅವರು ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಚೇರಿಯ ಕೆಲಸದಾಕೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ ಹಾಗೂ ಕುಟುಂಬದ ಒಳಜಗಳ ಈ ಭೀಕರ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಮಹೇಶ ಜಟ್ಟಾ ನಾಯ್ಕ ಅವರು ಸುಮಾರು 20 ವರ್ಷಗಳ ಹಿಂದೆ ಸುಚಿತ್ರಾ ನಾಯ್ಕ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಇಬ್ಬರು ಪುತ್ರಿಯರಿದ್ದು, ಕುಟುಂಬದೊಂದಿಗೆ ಬೆಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಾಗಿದ್ದರು.ಇದೇ ಸಂದರ್ಭದಲ್ಲಿ ಸುಚಿತ್ರಾ ನಾಯ್ಕ ಅವರಿಗೆ ಕಮಲಾಕರ ಭಟ್ಟ ಅವರ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ ಎನ್ನಲಾಗಿದೆ. ಮಹೇಶ ನಾಯ್ಕ ಅವರು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದಾಗ, ಸುಚಿತ್ರಾ ನಾಯ್ಕ ಅವರು ಕಮಲಾಕರ ಭಟ್ಟ ಅವರ ಶಿವಮೊಗ್ಗದ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು.

ಆರೋಪದಂತೆ, ಸುಚಿತ್ರಾ ನಾಯ್ಕ ಹಾಗೂ ಕಮಲಾಕರ ಭಟ್ಟ ಅವರು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಅತಂತ್ರಗೊಂಡ ಸುಮಶ್ರೀ ಅವರು ತಮ್ಮ ತಂದೆಗೆ ಮೆಸೇಜ್ ಕಳುಹಿಸಿ, “ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ, ಇಲ್ಲವಾದರೆ ಪ್ರಾಣಾಪಾಯ” ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂದೇಶದ ಬೆನ್ನಲ್ಲೇ ಮಹೇಶ ನಾಯ್ಕ ಅವರು ಮಗಳನ್ನು ಸಿದ್ದಾಪುರಕ್ಕೆ ಕರೆಸಿಕೊಂಡು, ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಮಕ್ಕಳ ಮೇಲಾದ ಹಿಂಸೆಯ ಬಗ್ಗೆ ದೂರು ಸಲ್ಲಿಸಿದ್ದರು.

ದೂರು ನೀಡಿದ ಬಳಿಕ ಮಹೇಶ ನಾಯ್ಕ ಅವರು ತಮ್ಮ ಮಗಳು ಜೊತೆ ಅಣ್ಣ ವಸಂತ ನಾಯ್ಕ ಅವರ ಅವರೆಕೊಪ್ಪದ ಮನೆಗೆ ತೆರಳಿದರು. ಅಲ್ಲಿ ಪತ್ನಿಯಿಂದ ಅನುಭವಿಸಿದ್ದ ಕಿರುಕುಳ ಹಾಗೂ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸುಮಶ್ರೀ ಅವರು ಕೂಡ ತಾಯಿಯ ಅಕ್ರಮ ಸಂಬಂಧ ಹಾಗೂ ತಮಗಾದ ತೊಂದರೆಗಳ ಬಗ್ಗೆ ವಿವರಿಸಿದರು.

ಆದರೆ, ಅದೇ ದಿನ ರಾತ್ರಿ ಸುಚಿತ್ರಾ ನಾಯ್ಕ, ಅವರ ತಂದೆ ಲೋಕನಾಥ ನಾಯ್ಕ, ಕಮಲಾಕರ ಭಟ್ಟ ಹಾಗೂ ಇನ್ನೂ ನಾಲ್ವರು ಅಪರಿಚಿತರು ವಸಂತ ನಾಯ್ಕ ಅವರ ಮನೆಗೆ ದಾಳಿ ನಡೆಸಿದ್ದಾರೆ. ಅಪರಿಚಿತರು ಕೈಯಲ್ಲಿ ಚಾಕು ಹಿಡಿದು ಬಂದಿದ್ದು, ಸುಮಶ್ರೀ ಅವರನ್ನು ಭಯಪಡಿಸಿ ಕೋಣೆಯಲ್ಲಿ ಬಂದಿಸಿದ್ದರು ಎಂದು ಆರೋಪಿಸಲಾಗಿದೆ.
ಘಟನೆಯನ್ನು ತಡೆಯಲು ಮುಂದಾದ ವಸಂತ ನಾಯ್ಕ ಅವರ ಮೇಲೆ ಚಾಕು ದಾಳಿ ನಡೆದಿದ್ದು, ಅವರು ಸ್ಥಳದಲ್ಲೇ ಕುಸಿದುಬಿದ್ದರು. ಮಧ್ಯಪ್ರವೇಶಕ್ಕೆ ಬಂದ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಎಂಬವರಿಗೆ ಕೂಡ ಗಂಭೀರ ಗಾಯಗಳಾಗಿವೆ. ಈ ವೇಳೆ ವಸಂತ ನಾಯ್ಕ ಅವರ ಪತ್ನಿ ಸಂಧ್ಯಾ ನಾಯ್ಕ ಅವರು ಪೊಲೀಸರಿಗೆ ಕರೆ ಮಾಡಲು ಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಪಕ್ಕದ ಮನೆಯವರು ಹಾಗೂ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ವಸಂತ ನಾಯ್ಕ ಅವರ ಸಾವನ್ನು ದೃಢಪಡಿಸಿದರು. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕೊಲೆ ಹಾಗೂ ಹಲ್ಲೆ ಪ್ರಕರಣದ ವೇಳೆ ಕಮಲಾಕರ ಭಟ್ಟ ಅವರು ಕಾರಿನಲ್ಲೇ ಇದ್ದು, ಘಟನೆಯಲ್ಲಿ ಅವರ ಪಾತ್ರ ಹಾಗೂ ಕುಮ್ಮಕ್ಕು ಇದೆ ಎಂದು ಸಂಧ್ಯಾ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಮಲಾಕರ ಭಟ್ಟ ಸೇರಿದಂತೆ ಆರು ಮಂದಿ ಸಹಚರರನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.
