
ಭಟ್ಕಳ: ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರೊಂದಿಗೆ ಪರಿಚಯ ಮಾಡಿಕೊಂಡು, ವಿಶ್ವಾಸ ಗಳಿಸಿದ ಬಳಿಕ ಖಾಸಗಿ ಚಿತ್ರಗಳನ್ನು ಬಳಸಿ ಹಣ ಹಾಗೂ ಅಸಭ್ಯ ಬೇಡಿಕೆಗಳನ್ನು ಮುಂದಿಟ್ಟು ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬಂಧಿತನನ್ನು ಹೊನ್ನಾವರ ತಾಲೂಕಿನ ಮಂಕಿ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಉಬರ್ ಪಾರ್ಸೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹ್ಮದ್ ಯುಶಾ (31) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಭಟ್ಕಳದ ಮಹಿಳೆಯೊಬ್ಬರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಸಾಧಿಸಿದ್ದ ಈತ, ಮೊಬೈಲ್ ಸಂಖ್ಯೆ ಪಡೆದು ನಿರಂತರ ಸಂಭಾಷಣೆ ನಡೆಸುತ್ತಿದ್ದ. ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಂಗ್ರಹಿಸಿಕೊಂಡು, ಅವುಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇಷ್ಟಕ್ಕೂ ಸೀಮಿತವಾಗದೇ, ಸಂತ್ರಸ್ತೆಯ ಕುಟುಂಬದವರಿಗೆ ಚಿತ್ರಗಳನ್ನು ಕಳುಹಿಸಿ ಮಾನಸಿಕ ಒತ್ತಡ ಉಂಟುಮಾಡಿದ್ದಾನೆ ಎನ್ನಲಾಗಿದೆ.
ನೊಂದ ಮಹಿಳೆಯ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು, ಬೆಂಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಮತ್ತು ಪೆನ್ ಡ್ರೈವ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯಲ್ಲಿ ಈತ ಇನ್ನೂ ಹಲವು ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿಗಳಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ್ ಎಂ, ಭಟ್ಕಳ ಡಿವೈಎಸ್ಪಿ ಮಹೇಶ್ ಎಂ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.ಭಟ್ಕಳ ಶಹರ ಸಿಪಿಐ ದಿವಾಕರ್ ಪಿ.ಎಂ ಅವರ ನೇತೃತ್ವದಲ್ಲಿ ಪಿಎಸ್ಐ ನವೀನ್ ಎಸ್. ನಾಯ್ಕ ಮತ್ತು ಸಿಬ್ಬಂದಿ ರವಿ ಪಟಗಾರ, ಕಾಶಿನಾಥ್ ಕೊಟಗುಣಶಿ, ಜೊತೆಗೆ ಕಾರವಾರ ಟೆಕ್ನಿಕಲ್ ಸೆಲ್ನ ಉದಯ್ ಗುಣಗಾ ಹಾಗೂ ಬಬನ್ ಕದಂ ತಂಡದವರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರಿಗೆ ಸಲಹೆ: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ, ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳುವ ಮೊದಲು ಅಗತ್ಯ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

