
ಭಟ್ಕಳ: ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅರಣ್ಯ ಹಕ್ಕು ಮತ್ತು ಸ್ಥಳ ಮಹಜರು ಪ್ರಕ್ರಿಯೆಗಳು ನೈಸರ್ಗಿಕ ನ್ಯಾಯದ ತತ್ವಗಳಿಗೆ ಅನುಗುಣವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ಮರುಪರಿಶೀಲನೆ ಕಾರ್ಯವನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಭಟ್ಕಳದಲ್ಲಿ ಬುಧವಾರ ನಡೆದ ಅರಣ್ಯ ಭೂಮಿ ಅತೀಕ್ರಮಣದಾರರ ಬೃಹತ್ ಸಭೆಯ ಬಳಿಕ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರಸ್ಕೃತ ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆಗೆ ರಾಜ್ಯ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿ ಜಂಟಿ ಮಹಜರು ಪ್ರಕ್ರಿಯೆ ನಡೆಸಲು ಸೂಚನೆ ನೀಡಿರುವುದನ್ನು ಸ್ವಾಗತಿಸಿದರು. ಹೋರಾಟ ಸಮಿತಿಯ ನಿರಂತರ ಪ್ರಯತ್ನ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಮತ್ತು ಸ್ಥಳೀಯ ಶಾಸಕರ ಸಹಕಾರದಿಂದ ಈ ಆದೇಶ ಹೊರಬಂದಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಳೆದ ವಾರದಿಂದ ಹಲವು ಪ್ರದೇಶಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆಗಳು ಆರಂಭವಾಗಿದ್ದರೂ, ಕೆಲವು ಕಡೆಗಳಲ್ಲಿ ಅವು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು. ಅಲ್ಪ ಪ್ರಮಾಣದ ಮಾಲ್ಕಿ ಹಿಡುವಳಿ ಇರುವ ಪ್ರಕರಣಗಳಲ್ಲಿಯೂ ಮಹಜರು ನಡೆಸದಂತೆ ಮೌಖಿಕ ಸೂಚನೆಗಳಿವೆ ಎಂಬ ಆರೋಪವೂ ಕೇಳಿಬಂದಿದ್ದು, ಇದರಿಂದ ಅರಣ್ಯವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದರು.ಪ್ರಸ್ತುತ ಜಿಲ್ಲೆಯಲ್ಲಿ 67,226 ತಿರಸ್ಕೃತ ಹಾಗೂ 16,093 ಪರಿಶೀಲನೆ ಬಾಕಿ ಇರುವ ಅರ್ಜಿಗಳು ಸೇರಿ ಒಟ್ಟು 83,319 ಅರ್ಜಿಗಳು ಮರುಪರಿಶೀಲನೆಗಾಗಿ ಬಾಕಿಯಿವೆ. ಈ ವ್ಯಾಪಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನಿಷ್ಠ ಆರು ತಿಂಗಳ ಅವಧಿಯೂ ಸಾಕಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆದ್ದರಿಂದ ಮರುಪರಿಶೀಲನೆ ಕಾರ್ಯಕ್ಕೆ ಕನಿಷ್ಠ ಆರು ತಿಂಗಳ ಅವಧಿ ವಿಸ್ತರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.ಅರಣ್ಯ ಹಕ್ಕು ನಿಯಮ 13ರಲ್ಲಿ ಉಲ್ಲೇಖಿಸಿರುವ ಪುರಾವೆಗಳ ಆಧಾರದ ಮೇಲೆ ಸ್ಥಳ ಪರಿಶೀಲನೆ ನಡೆಸಿ, ನೈಜ ಸಾಗುವಳಿ ಪ್ರದೇಶವನ್ನು ಗುರುತಿಸುವುದು ಅತ್ಯಂತ ಮುಖ್ಯ. ಮಹಜರು ಪ್ರಕ್ರಿಯೆ ಕೇವಲ ಔಪಚಾರಿಕ ಕ್ರಮವಾಗದೆ, ಅರ್ಹ ಅರಣ್ಯವಾಸಿಗಳಿಗೆ ಭೂಹಕ್ಕು ನೀಡುವ ದಿಸೆಯಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಕೊಚರೇಕರ ಹೇಳಿದರು. ರಾಜ್ಯ ಮಟ್ಟದ ನಿರ್ದೇಶನಗಳಂತೆ ಯಾರೂ ಭೂಹಕ್ಕಿನಿಂದ ವಂಚಿತರಾಗದಂತೆ ಆಡಳಿತ ಇಚ್ಛಾಶಕ್ತಿ ತೋರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಜನಪರ ವೇದಿಕೆಯ ಅಧ್ಯಕ್ಷ ಡಾ. ನಾಗೇಶ ನಾಯ್ಕ ಮಾತನಾಡಿ, ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗೆ ಆದೇಶ ಹೊರಬಂದಿರುವುದು ಜಿಲ್ಲೆಯ ಮಟ್ಟಿಗೆ ಮಹತ್ವದ ಬೆಳವಣಿಗೆ ಎಂದು ಹೇಳಿದರು. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನೀಡುವ ಮಹಜರು ದೃಢೀಕರಣ ಅರಣ್ಯವಾಸಿಗಳ ಬದುಕಿಗೆ ಭದ್ರತೆ ಒದಗಿಸುವಂತಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅರಣ್ಯ ಹಕ್ಕು ಕಾಯ್ದೆಯಡಿ ನೆರೆಯ ಆಂಧ್ರಪ್ರದೇಶದಲ್ಲಿ ಶೇ.79 ಹಾಗೂ ಕೇರಳದಲ್ಲಿ ಶೇ.65ರಷ್ಟು ಅರ್ಹರಿಗೆ ಭೂಅಧಿಭೋಗ ಹಕ್ಕು ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಈ ಪ್ರಮಾಣ ಶೇ.4ರಷ್ಟೇ ಇರುವುದನ್ನು ಅವರು ವಿಷಾದಿಸಿದರು.

ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಜಿಲ್ಲೆಯಲ್ಲಿನ ಅರಣ್ಯ ಹಕ್ಕು ಹೋರಾಟವು ಸಕ್ರಿಯ ಹಂತದಲ್ಲಿದ್ದು, ಅರ್ಹರಿಗೆ ನ್ಯಾಯ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮರುಪರಿಶೀಲನಾ ಪ್ರಕ್ರಿಯೆ ಕುರಿತು ಅರಣ್ಯ ಅತೀಕ್ರಮಣದಾರರಿಗೆ ಅಗತ್ಯ ಮಾಹಿತಿ ನೀಡಲಾಗಿದೆ ಎಂದರು.ಸಭೆಯಲ್ಲಿ ಇನಾಯತುಲ್ ಶಾಬಂದ್ರಿ, ಎಂ.ಡಿ. ನಾಯ್ಕ, ಗಣಪತಿ ನಾಯ್ಕ ಜಾಲೀ, ಎ.ಎಂ. ಮುಲ್ಲಾ, ಈಶ್ವರ ನಾಯ್ಕ, ಖಯೂಂ ಸಾಬ್, ಶ್ರೀಧರ ಶೆಟ್ಟಿ, ಪಾಂಡುರಂಗ ನಾಯ್ಕ ಬೆಳಕೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.

