
ಶಿರಸಿ: ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಫೆಬ್ರವರಿ 24ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆ ಭಕ್ತರಲ್ಲಿ ಭಾರೀ ಉತ್ಸಾಹ ಕಂಡುಬರುತ್ತಿದೆ. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡು ಕೆಲ ಆನ್ಲೈನ್ ವೇದಿಕೆಗಳು ಭಕ್ತರನ್ನು ಗುರಿಯಾಗಿಸಿಕೊಂಡು ವಂಚನೆಗೆ ಯತ್ನಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

‘ಯಜಮಾನ’ ಎಂಬ ಹೆಸರಿನ ಜಾಲತಾಣ ಹಾಗೂ ಅದರ ಸಾಮಾಜಿಕ ಜಾಲತಾಣ ಪುಟಗಳಿಗೆ ಶ್ರೀ ಮಾರಿಕಾಂಬಾ ದೇವಸ್ಥಾನದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ದೇಗುಲ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ದೇವಿಯ ಹೆಸರಿನಲ್ಲಿ ಪೂಜೆ, ಸೇವೆ ಮಾಡಿಸುವುದಾಗಿ ಹೇಳಿ ಹಣ ಸಂಗ್ರಹಿಸುವ ಪ್ರಯತ್ನಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ.AI ಆಧಾರಿತ ಭಾವನಾತ್ಮಕ ವಿಡಿಯೋ ಮೂಲಕ ಪ್ರಚಾರ ಜಾತ್ರೆಗೆ ಸ್ವಯಂ ಹಾಜರಾಗಲು ಸಾಧ್ಯವಾಗದ ಭಕ್ತರನ್ನು ಗುರಿಯಾಗಿಸಿಕೊಂಡು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಭಾವನಾತ್ಮಕ ಸಂದೇಶ ಹೊಂದಿದ ವಿಡಿಯೋಗಳನ್ನು ಹಂಚಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ‘ಮನೆಯಲ್ಲಿ ಕುಳಿತು ವಿಶೇಷ ಸೀರೆ ಸೇವೆ’ ಎಂಬ ಹೆಸರಿನಲ್ಲಿ ಪ್ರಚಾರ ನಡೆಸಿ ಹಣ ಪಾವತಿಸಲು ಮನವೊಲಿಸಲಾಗುತ್ತಿದೆ.ವಂಚಕರು ದೇವಿಗೆ ಸೀರೆ ಉಡಿ ಸಲ್ಲಿಸುವ ಸೇವೆಗೆ ₹351 ಮತ್ತು ಪ್ರಸಾದ ಕಳುಹಿಸುವ ಹೆಸರಿನಲ್ಲಿ ಹೆಚ್ಚುವರಿಯಾಗಿ ₹199 ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಸಾದವಾಗಿ ಬ್ಲೌಸ್ ಪೀಸ್, ಕುಂಕುಮ, ಹಳದಿ ಕಳುಹಿಸಲಾಗುತ್ತದೆ ಎಂಬ ಹೇಳಿಕೆಯೂ ವಿಡಿಯೋಗಳಲ್ಲಿ ಕಾಣಿಸಿಕೊಂಡಿದೆ.

ಅಧಿಕೃತ ಸೇವೆಗಳ ಕುರಿತು ಸ್ಪಷ್ಟನೆ
ದೇಗುಲ ಸನ್ನಿಧಿಯಲ್ಲಿ ‘ಉಡಿ ಸೇವೆ’ಗೆ ₹351 ನಿಗದಿ ದರ ಇಲ್ಲ. ಜೊತೆಗೆ ಪ್ರಸಾದವನ್ನು ಕೋರಿಯರ್ ಮೂಲಕ ಮನೆಗೆ ತಲುಪಿಸುವ ವ್ಯವಸ್ಥೆಯೂ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ವಿಡಿಯೋದಲ್ಲಿ ಕಾಣಿಸುವ ಅರ್ಚಕರು ಸ್ಥಳೀಯರಲ್ಲ; ಅವರಿಗೆ ದೇಗುಲ ಆಡಳಿತ ಮಂಡಳಿಯೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಲಾಗಿದೆ.“ಶ್ರೀ ಮಾರಿಕಾಂಬಾ ದೇವಸ್ಥಾನದ ಅಧಿಕೃತ ಆನ್ಲೈನ್ ಸೇವೆಗಳು ಮತ್ತು ಪಾವತಿಗಳು ದೇವಸ್ಥಾನದ ಅಧಿಕೃತ ವೆಬ್ಸೈಟ್ ಅಥವಾ ದೇವಸ್ಥಾನದ ನೇರ ವ್ಯವಸ್ಥೆಯ ಮೂಲಕ ಮಾತ್ರ ನಡೆಯುತ್ತವೆ. ಅಪರಿಚಿತ ಲಿಂಕ್ಗಳು ಅಥವಾ ಖಾಸಗಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದರಿಂದ ದೂರವಿರಬೇಕು,” ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

ಸಂಶಯಾಸ್ಪದ ಚಟುವಟಿಕೆ ಕಂಡರೆ ದೂರು ನೀಡಿ
ಈ ರೀತಿಯ ಆನ್ಲೈನ್ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಯಾವುದೇ ಅನುಮಾನಾಸ್ಪದ ಕರೆ, ಲಿಂಕ್ ಅಥವಾ ಖಾತೆ ವಿವರಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಶಿರಸಿಯ ವೈದ್ಯ ಡಾ. ರವಿಕಿರಣ ಪಟವರ್ಧನ ಅವರು ಮನವಿ ಮಾಡಿದ್ದಾರೆ.ಜಾತ್ರೆ ಸಂದರ್ಭದಲ್ಲಿ ಭಕ್ತರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ, ಪರಿಶೀಲಿತ ಮಾರ್ಗಗಳ ಮೂಲಕವೇ ಸೇವೆ ಪಡೆಯುವುದು ಸೂಕ್ತ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
