ಭಟ್ಕಳ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ ಹಾಗೂ ಕರಾವಳಿ ಸಮಾಚಾರ ಮಾಸಪತ್ರಿಕೆಯ ಸಂಪಾದಕರಾದ ಅರ್ಜುನ್ ಮಲ್ಯ ಅವರನ್ನು ಆಯ್ಕೆ ಮಾಡಲಾಗಿದೆ.ಸಂಘಟನೆಯ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ ನಾಯ್ಕ್ ಅವರ ಶಿಫಾರಸು ಹಾಗೂ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನಾಗರಾಜ ದೈವಜ್ಞ ಅವರ ಅನುಮೋದನೆಯ ಆಧಾರದಲ್ಲಿ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರು ಅರ್ಜುನ್ ಮಲ್ಯ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ, ಪತ್ರಕರ್ತರ ಹಕ್ಕುಗಳ ರಕ್ಷಣೆ, ವೃತ್ತಿಪರ ಗೌರವದ ಕಾಪಾಡುವಿಕೆ ಹಾಗೂ ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಈಗಾಗಲೇ ರಾಜ್ಯದ 27 ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿರುವ ಸಂಘಟನೆ, 200ಕ್ಕೂ ಹೆಚ್ಚು ತಾಲ್ಲೂಕು ಮಟ್ಟದಲ್ಲಿಯೂ ತನ್ನ ಬಲಿಷ್ಠ ಸಂಘಟನಾ ಜಾಲವನ್ನು ವಿಸ್ತರಿಸಿದೆ.

ನೂತನ ಜವಾಬ್ದಾರಿ ಸ್ವೀಕರಿಸಿರುವ ಅರ್ಜುನ್ ಮಲ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರ ನೈಜ ಸಮಸ್ಯೆಗಳು ಮತ್ತು ಆಶಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಮಲ್ಯ ಅವರ ಆಯ್ಕೆಗೆ ಅಂಕೋಲಾ ತಾಲೂಕು ಅಧ್ಯಕ್ಷ ಮಾರುತಿ ಎಚ್., ಮುಂಡಗೋಡು ತಾಲೂಕು ಅಧ್ಯಕ್ಷ ಸಂತೋಷ್ ದೈವಜ್ಞ, ಶಿರಸಿ ತಾಲೂಕು ಅಧ್ಯಕ್ಷ ರಾಜೇಶ್ ಮೊಗೇರ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಆಚಾರ್ಯ (ಶಿರಸಿ) ಅಭಿನಂದನೆಗಳನ್ನು ತಿಳಿಸಿದ್ದಾರೆ.
