ಭಟ್ಕಳ: ಯುಗಾದಿ ಹಬ್ಬದ ಅಂಗವಾಗಿ ನಾಗಮಾಸ್ತಿ ಯೋಗ ಕೇಂದ್ರ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಗಮನಾರ್ಹವಾಗಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗಮಾಸ್ತಿ ಕ್ಷೇತ್ರದ ಅಧ್ಯಕ್ಷ ಸತೀಶಕುಮಾರ್ ನಾಯ್ಕ, ಈ ರೀತಿಯ ಸಾಹಿತ್ಯಿಕ ಕಾರ್ಯಕ್ರಮಗಳು ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಯುಗಾದಿಯಂತಹ ಹಬ್ಬದ ಸಂದರ್ಭದಲ್ಲಿ ಕವಿಗೋಷ್ಠಿ ಮತ್ತು ಉಪನ್ಯಾಸಗಳನ್ನು ಆಯೋಜಿಸಿರುವುದು ವಿಶೇಷವಾಗಿದ್ದು, ಇದರ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿಯ ಮೌಲ್ಯಗಳು ವ್ಯಾಪಕವಾಗಿ ಹರಡುತ್ತವೆ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಲೆ-ಕಾಲೇಜುಗಳು ಹಾಗೂ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಶ್ಲಾಘಿಸಿದರು. ಅಧ್ಯಕ್ಷ ಗಂಗಾಧರ ನಾಯ್ಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ಚಟುವಟಿಕೆಗಳು ಭಟ್ಕಳ ತಾಲೂಕಿಗೆ ಮಾತ್ರವಲ್ಲ, ಜಿಲ್ಲೆಯ ಮಟ್ಟದಲ್ಲಿಯೂ ಗುರುತನ್ನು ತಂದಿವೆ ಎಂದು ಹೇಳಿದರು.
ಇದೇ ವೇಳೆ ನಾಗಮಾಸ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳ ಕುರಿತು ವಿವರಿಸಿದ ಅವರು, ಯೋಗ ಕೇಂದ್ರದ ಅಭಿವೃದ್ಧಿಗೆ ಗೋವಿಂದ ಗುರುಜಿ, ಲತಾ ನಾಯ್ಕ ಹಾಗೂ ಸ್ಥಳೀಯರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಯುಗಾದಿ ಪ್ರಕೃತಿಯ ನವಚೇತನವನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ ಎಂದರು. ಸುತ್ತಮುತ್ತಲಿನ ಪರಿಸರದಲ್ಲಿ ಹೊಸ ಚಿಗುರು ಮೂಡುವ ಈ ಸಮಯ, ಬದುಕಿನಲ್ಲೂ ಹೊಸ ಆರಂಭಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳ ಮೂಲಕ ಪರಂಪರೆ, ಆಚರಣೆಗಳು ಮತ್ತು ಅವುಗಳ ಹಿಂದಿರುವ ವೈಚಾರಿಕ ಅಂಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬಹುದು ಎಂದು ಅಭಿಪ್ರಾಯಪಟ್ಟರು.ಶಿಕ್ಷಕ ಸುರೇಶ್ ಮುರ್ಡೇಶ್ವರ ಯುಗಾದಿ ಹಬ್ಬದ ಮಹತ್ವದ ಕುರಿತು ಉಪನ್ಯಾಸ ನೀಡಿ, ಸಂವತ್ಸರಗಳು ಮತ್ತು ಮಾಸಗಳ ಹೆಸರನ್ನು ಮಕ್ಕಳಿಗೆ ತಿಳಿಸುವುದು ಅವರ ಭಾಷಾ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು.ಕವಿಗೋಷ್ಠಿಯಲ್ಲಿ ಮಾನಸುತ ಶಂಭು ಹೆಗಡೆ, ಶ್ರೀಧರ್ ಶೇಟ್ ಶಿರಾಲಿ, ಪೂರ್ಣಿಮಾ ಕರ್ಕಿಕರ್, ಜಯಶ್ರೀ ಆಚಾರ್ಯ, ರಾಘವೇಂದ್ರ ಮಡಿವಾಳ ಹಾಗೂ ಪ್ರತಿಭಾ ಕರ್ಕಿಕರ್ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಮೆಚ್ಚುಗೆ ಪಡೆದರು.
ಈ ಸಂದರ್ಭದಲ್ಲಿ ನಾಗಮಾಸ್ತಿ ಯೋಗ ಕೇಂದ್ರವು ಒಂದು ವರ್ಷ ಪೂರೈಸಿದ ಹಿನ್ನೆಲೆ ಯೋಗಗುರು ಗೋವಿಂದ ದೇವಾಡಿಗ ಮತ್ತು ಯೋಗ ಶಿಕ್ಷಕಿ ಲತಾ ನಾಗರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹೇಮಾವತಿ ನಾಯ್ಕ ಹಾಗೂ ರೇಖಾ ನಾಯ್ಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ನಾಗರಾಜ ನಾಯ್ಕ ಸ್ವಾಗತಿಸಿದರು, ರೇಖಾ ಲೋಕೇಶ್ ನಾಯ್ಕ ವಂದಿಸಿದರು. ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಣೆ ನಡೆಸಿದರೆ, ಲತಾ ನಾಯ್ಕ ಪ್ರಾರ್ಥನೆ ಸಲ್ಲಿಸಿದರು.
