ಅಂಕೋಲಾ:ಅಂಕೋಲಾದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲಿನ ದಾಳಿಯ ಹಿಂದೆ ಪ್ರಭಾವಿ ಉದ್ಯಮಿಯೊಬ್ಬರ ಕೈವಾಡ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಕೆಲವು ರಾಜಕೀಯ ಸಂಪರ್ಕಗಳೂ ಇರಬಹುದೆಂದು ನಾಯಕ ಅವರು ಸ್ವತಃ ಶಂಕೆ ವ್ಯಕ್ತಪಡಿಸಿದ್ದಾರೆ.ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದಾಳಿ ರಾಜಕೀಯ ಹಿನ್ನೆಲೆಯಿಂದ ನಡೆದಿರಬಹುದು ಎಂದು ಹೇಳಿದರು. “ನನ್ನ ಮೇಲೆ ದಾಳಿ ನಡೆಸಿದವರೊಂದಿಗೆ ಕೆಲ ಶಾಸಕರ ಸಂಪರ್ಕವಿದೆ ಎಂಬ ಮಾಹಿತಿ ಕೇಳಿಬರುತ್ತಿದೆ,” ಎಂದು ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ವೈಯಕ್ತಿಕ ಅಥವಾ ಆರ್ಥಿಕ ವೈಷಮ್ಯ ಇಲ್ಲವೆಂದು ಸ್ಪಷ್ಟಪಡಿಸಿದ ಅವರು, “ಹೆಣ್ಣು, ಹಣ ಅಥವಾ ಜಮೀನು ವಿಚಾರದಲ್ಲಿ ನನ್ನ ಮೇಲೆ ಯಾವುದೇ ವಿವಾದಗಳಿಲ್ಲ. ಆದ್ದರಿಂದ ಈ ದಾಳಿಯ ಹಿಂದೆ ರಾಜಕೀಯ ದ್ವೇಷವೇ ಮುಖ್ಯ ಕಾರಣವಾಗಿರಬಹುದು,” ಎಂದು ಅಭಿಪ್ರಾಯಪಟ್ಟರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವೇ ಕೆಲವರಿಗೆ ಅಸಮಾಧಾನ ತಂದಿರಬಹುದು ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ ಎಂದರು.
ಇದೇ ವೇಳೆ, ಸಹಕಾರಿ ಚುನಾವಣೆಯ ಸಂದರ್ಭದಲ್ಲೂ ರಾಜಕೀಯ ಭಿನ್ನಾಭಿಪ್ರಾಯಗಳು ನಡೆದಿದ್ದನ್ನು ಅವರು ಒಪ್ಪಿಕೊಂಡರು. “ಆ ಚುನಾವಣೆಯಲ್ಲಿ ನಾವು ಎಲ್ಲಾ ಸ್ಥಾನಗಳನ್ನು ಗೆದ್ದಿದ್ದೇವೆ. ಜನರ ಬೆಂಬಲದಿಂದಲೇ ಈ ಜಯ ಸಾಧ್ಯವಾಯಿತು. ಫಲಿತಾಂಶದ ದಿನ ಕೆಲವು ಗೊಂದಲಗಳು ಉಂಟಾದವು,” ಎಂದು ಅವರು ವಿವರಿಸಿದರು.

ಹಿಂದಿನ ಒಂದು ಘಟನೆಯನ್ನು ನೆನಪಿಸಿಕೊಂಡ ಅವರು, ಶಿರೂರು ಗುಡ್ಡ ಕುಸಿತದ ಸಂದರ್ಭದಲ್ಲಿ ಮುಖ್ಯಮಂತ್ರಿ ತಮ್ಮ ಮನೆಗೆ ಭೇಟಿ ನೀಡಿದಾಗ ಸ್ಥಳೀಯ ಶಾಸಕರು ಒಳಗೆ ಪ್ರವೇಶಿಸದ ವಿಚಾರವನ್ನು ಉಲ್ಲೇಖಿಸಿದರು. “ಆ ದಿನವೇ ನಮ್ಮ ನಡುವೆ ಭಿನ್ನಾಭಿಪ್ರಾಯ ಸ್ಪಷ್ಟವಾಗಿತ್ತು,” ಎಂದು ಹೇಳಿದರು.ತಮ್ಮ ಮತ್ತು ಶಾಸಕರ ನಡುವಿನ ರಾಜಕೀಯ ವೈಮನಸ್ಸು ಹೊಸದಲ್ಲ ಎಂದು ಹೇಳಿದ ಅವರು, “ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ದಾಳಿಗೆ ಸಂಬಂಧಿಸಿದವರೊಂದಿಗೆ ಅವರ ಸಂಪರ್ಕ ಇರುವ ಸಾಧ್ಯತೆಗಳನ್ನು ನಿರಾಕರಿಸಲಾಗುವುದಿಲ್ಲ,” ಎಂದು ಹೇಳಿದ್ದಾರೆ. ಮುಂಚಿತ ಮಾಹಿತಿ ಇದ್ದಿದ್ದರೆ ಭದ್ರತಾ ಕ್ರಮ ಕೈಗೊಳ್ಳಬಹುದಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
