ಲೋಕಸಭಾ ಚುನಾವಣೆಯಲ್ಲಿ ನಾವು 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ನಾವು ನುಡಿದಂತೆ ನಡೆದಿದ್ದೇವೆ, ಎಲ್ಲ ಐದೂಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ, ಇದರ ಆಧಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಅವರು ಕಾಂಗ್ರೆಸ್ನ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ನಮ್ಮ ಪಕ್ಷದ ಯಶಸ್ವೀ “ಗ್ಯಾರಂಟಿ’ ಪದ ವನ್ನು ಬಿಜೆಪಿಯವರು ಕದ್ದು ಈಗ “ಮೋದಿ ಗ್ಯಾರಂಟಿ’ ಎನ್ನತೊಡಗಿದ್ದಾರೆ. ನಮ್ಮ ಕಾರ್ಯಕರ್ತರು ಸರಕಾರದ ಗ್ಯಾರಂಟಿ ಯೋಜನೆಗಳ ವಿಷಯವನ್ನು ಮನೆ ಮನೆಗೆ ತಲುಪಿಸದೇ ಇದ್ದರೆ ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ತಾವೇ ಮಾಡಿದ್ದು ಎಂದರೂ ಆಶ್ಚರ್ಯವಿಲ್ಲ ಎಂದರು.
ಬಿಜೆಪಿಯವರನ್ನು ನಂಬಬೇಡಿ, ಅವರು ನುಡಿದಂತೆ ನಡೆಯುವುದಿಲ್ಲ. ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಏನು ಮಾಡಿದ್ದಾರೆ? ಕೇವಲ ಕೋಮುವಾದ ಮಾಡುವುದು, ಧರ್ಮಗಳ ಮಧ್ಯೆ ಬೆಂಕಿಹಚ್ಚುವುದು, ಭಾವನಾತ್ಮಕ, ಧಾರ್ಮಿಕ ವಿಷಯಗಳ ಆಧಾರದಲ್ಲಿ ಬಿಜೆಪಿ ಕೆಲಸ ಮಾಡುತ್ತದೆ. ಹತ್ತು ವರ್ಷಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದಾರಾ? ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ, ಪೆಟ್ರೋಲ್ ಬೆಲೆ ಇಳಿಸು
ತ್ತೇವೆ ಎಂದರು, ಇಳಿಸಿದ್ದಾರಾ?ಅಚ್ಛೇದಿನ್ ತರುತ್ತೇವೆ ಎಂದಿದ್ದರು, ತಂದರಾ? ಆಹಾರ ಪದಾರ್ಥಗಳ ಬೆಲೆ ಇಳಿಸಿದ್ದಾರಾ? ನೀವು ಪ್ರಜ್ಞಾವಂತರಿದ್ದೀರಿ. ಸತ್ಯ ಸಂಗತಿಯನ್ನು ಜನರಿಗೆ ತಿಳಿಸಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
2013ರಲ್ಲಿ ನಾವು ಕೊಟ್ಟಿದ್ದ 165 ಭರವಸೆಗಳಲ್ಲಿ 158ನ್ನೂ ಈಡೇರಿಸಿ ದ್ದೆವು. ಆದರೂ ಅದನ್ನು ಜನರಿಗೆ ತಲಪಿಸುವಲ್ಲಿ ಹಿನ್ನಡೆ ಕಂಡ ಕಾರಣ ನಾವು ಸೋಲುವಂತಾಯಿತು. 2023ರ ಚುನಾವಣೆಯಲ್ಲಿ ಜನ ನಮಗೆ ಆಶೀರ್ವಾದ ಮಾಡಿದರು. ಇಡೀ ದೇಶದಲ್ಲೇ ಇಂದು5 ಗ್ಯಾರಂಟಿಗಳನ್ನು ಕೇವಲ 8 ತಿಂಗಳಲ್ಲಿ ಜಾರಿ ಮಾಡಿದ್ದಿದ್ದರೆ ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಮಾತ್ರ ಎಂದರು.
ಲೋಕಸಭಾ ಚುನಾವಣೆ ಮುಂಚಿತವಾಗಿ ರಾಜ್ಯದಲ್ಲೇ ನಡೆಯುತ್ತಿರುವ ಮೊದಲ ಸಭೆ ಇದು. ಮಂಗಳೂರು ಹಾಗೂ ಉಡುಪಿ ಲೋಕಸಭಾ ಸ್ಥಾನಗಳನ್ನು ಗೆಲ್ಲಲೇ ಬೇಕು. ದೇಶ ಹಾಗೂ ರಾಜ್ಯದಲ್ಲಿ ರಾಜಕಾರಣ ಹೇಗೆ ನಡೆಯುತ್ತಿದೆ ಎನ್ನುವುದನ್ನು ಇಲ್ಲಿನ ಜನ ಅರ್ಥ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ತೀರ್ಮಾನಿಸುತ್ತಾರೆ ಎಂಬ ಕಾರಣದಿಂದ ನಮಗೆ ಇದು ಮುಖ್ಯ ಎಂದು ನುಡಿದರು.
2023ರ ಮೇ 20ರಂದು ನಮಗೆ ಅಧಿಕಾರ ಬಂದಿತು. 155 ಕೋಟಿ ಮಹಿಳೆಯರು ಈವರೆಗೆ ಉಚಿತವಾಗಿ ಸರಕಾರಿ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. 1.20 ಕೋಟಿ ಕುಟುಂಬಗಳಿಗೆ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ. 1.17 ಕೋಟಿ ಮಹಿಳೆಯರಿಗೆ 2 ಸಾವಿರ ರೂ. ಗೃಹಲಕ್ಷ್ಮಿ ಹಣ ತಲುಪುತ್ತಿದೆ. ಈ ವರ್ಷ 36 ಸಾವಿರ ಕೋಟಿ ರೂ. ಮೊತ್ತ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಕೈ ತಲುಪಿದೆ ಎಂದು ವಿವರಿಸಿದ ಸಿದ್ದರಾಮಯ್ಯ, ಈ ವರ್ಷ ಗ್ಯಾರಂಟಿ ಯೋಜನೆಗಳ ಮೂಲಕ 52 ಸಾವಿರ ಕೋಟಿ ರೂ. ಫಲಾನುಭವಿಗಳಿಗೆ ತಲುಪಲಿದೆ. ಬಿಜೆಪಿಯವರಿಗೆ ಯಾವತ್ತಾದರೂ ಇಂಥ ಕೆಲಸ ಮಾಡಲು ಸಾಧ್ಯ
ವಾಗಿದೆಯೇ ಎಂದು ಹರಿಹಾಯ್ದರು.
ರಾಜ್ಯ ದಿವಾಳಿ ಆಗಿಲ್ಲ:
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಮೋದಿ ಹೇಳಿದ್ದರು. ಆದರೆ ದಿವಾಳಿ ಆಗಿಲ್ಲ, ಆರ್ಥಿಕವಾಗಿ ಸುಭದ್ರವಾಗಿದೆ. ಇಲ್ಲದಿದ್ದರೆ3.71 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಲು ಆಗುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ಸ್ವತಂತ್ರ ಭಾರತದಲ್ಲೇ ಮೋದಿಯಷ್ಟು ಸುಳ್ಳು ಹೇಳುವ ಬೇರೆ ಪ್ರಧಾನಿಯನ್ನು ನೋಡಿಲ್ಲ ಎಂದು ಟೀಕಿಸಿದರು.
ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ದೊಡ್ಡ ರಾಜ್ಯವಾಗಿ 4.30 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದ್ದರೂ ನಮಗೆ ಸಿಗುತ್ತಿರುವುದು ಕೇವಲ 50,257 ಕೋಟಿ ರೂ.ಗಳು ಮಾತ್ರ. ಕರ್ನಾಟಕಕ್ಕೆ ನರೇಂದ್ರ ಮೋದಿ ಮತ್ತು ಕರ್ನಾಟಕದಿಂದಲೇ ರಾಜ್ಯಸಭೆ ಸದಸ್ಯರಾದ ಸಚಿವೆ ನಿರ್ಮಲಾ ಸೀತಾರಾಮನ್ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಹೇಳಿದರೆ ಬಿಜೆಪಿಯವರಿಗೆ ಯಾಕೆ ಮೈಉರಿ? ರಾಜ್ಯದ 7 ಕೋಟಿ ಕನ್ನಡಿಗರ ಹಿತರಕ್ಷಣೆಯ ಬದ್ಧತೆ ನಿಮ್ಮಲ್ಲಿ ಇದ್ದಿದ್ದರೆ ದಿಲ್ಲಿಯಲ್ಲಿ ನಡೆದ ನಮ್ಮ ಚಳವಳಿಯಲ್ಲಿ ಭಾಗವಹಿಸಬೇಕಿತ್ತು. ಕೇಂದ್ರ ಬಿಜೆಪಿ ಸರಕಾರದಿಂದ ಕನ್ನಡಿಗರಿಗೆ ಅನ್ಯಾಯ ಆಗಿದ್ದಷ್ಟೇ ಅಲ್ಲ, ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಿದೆ ಎಂದು ಅವರು ವಾಗ್ಧಾಳಿ ನಡೆಸಿದರು.
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 5,495 ಕೋಟಿ ರೂ. ಅನುದಾನ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿ 11,495 ಕೋಟಿ ರೂ. ಬರಬೇಕಿತ್ತು. ಆದರೆ ನಿರ್ಮಲಾ ಸೀತಾರಾಮನ್ ಈ ಹಣ ಕೊಡಲಾಗದು ಎಂದು ತಿರಸ್ಕರಿಸಿದ್ದಾರೆ ಎಂದು ಆಪಾದಿಸಿದರು.