ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜನತಾ ವಿದ್ಯಾಲಯದ ಸಹಯೋಗದಲ್ಲಿ ದಿನಕರ ದೇಸಾಯಿ ಸಂಸ್ಮರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಾಹಿತಿ ನಾರಾಯಣ ಯಾಜಿ ಶಿರಾಲಿ ಉದ್ಘಾಟಿಸಿ ದಿನಕರ ದೇಸಾಯಿಯವರು ತಮ್ಮ ಹೆಸರಿಗೆ ಅನುಗುಣವಾಗಿ ಸಾಹಿತ್ಯ ಕ್ಷೇತ್ರ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿ ಸೂರ್ಯನಂತೆ ಬೆಳಗಿದರು. ಜನತಾ ವಿದ್ಯಾಲಯ ಸ್ಥಾಪಿಸಿ ಅಕ್ಷರ ಕ್ರಾಂತಿಯನ್ನು ಮಾಡಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದು ನುಡಿದರಲ್ಲದೇ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಿದ ಸಾಹಿತ್ಯ ಪರಿಷತ್ತು ಹಾಗೂ ಜನತಾ ವಿದ್ಯಾಲಯ ಪ್ರೌಢಶಾಲೆಗೆ ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ದಿನಕರ ದೇಸಾಯಿಯವರು ಕವಿಯಾಗಿ, ಲೇಖಕರಾಗಿ, ಪತ್ರಕರ್ತರಾಗಿ, ಸಂಸದರಾಗಿ, ಸಾಮಾಜಿಕ ಹೋರಾಟಗಾರರಾಗಿ ಮಾತ್ರವಲ್ಲ ಶಿಕ್ಷಣ ತಜ್ಞರಾಗಿ ಹತ್ತು ಹಲವು ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಇಂದಿಗೂ ನೆನಪಿಸುವಂಥ ವ್ಯಕ್ತಿಯಾಗಿದ್ದಾರೆ. ಅವರ ಸಾಧನೆಯಿಂದ ಪ್ರೇರಿತರಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ನಮ್ಮ ನಂತರವೂ ನೆನಪಿಸುವಂಥ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರಲ್ಲದೇ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕರ ಹಾಗೂ ಶಿಕ್ಷಕ ವೃಂದದವರ ಸಹಕಾರವನ್ನು ಸ್ಮರಿಸಿದರು.
ಸಾಹಿತಿ ಮಾನಾಸುತ ಶಂಭು ಹೆಗಡೆ ಚುಟುಕು ವಾಚನದ ಮೂಲಕ ನುಡಿನಮನ ಸಲ್ಲಿಸಿದರು. ಪ್ರಾಂಶುಪಾಲ ಅಮೃತ ರಾಮರಥ ದಿನಕರ ದೇಸಾಯಿಯವರ ಬದುಕು ಸಾಧನೆಯ ಕುರಿತು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ದೇಸಾತಿಯವರ ಚುಟುಕು ವಾಚನ ಮಾಡಿದರು.ಮುಖ್ಯಾಧ್ಯಾಪಕಿ ಆಶಾ ಭಟ್ ಎಲ್ಲರನ್ನು ಸ್ವಾಗತಿಸಿದರು. ದಿನಕರ ದೇಸಾಯಿ ಸಂಸ್ಮರಣೆಯ ಅಂಗವಾಗಿ ಆಯೋಜಿಸಿದ ಚುಟುಕು ವಾಚನ, ಗೀತ ಗಾಯನ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ವಿತರಿಸಲಾಯಿತು. ಆರಂಭದಲ್ಲಿ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಶಿಕ್ಷಕಿ ಲೀಲಾವತಿ ಮೊಗೇರ ಹಾಗೂ ಶಿಕ್ಷಕ ಅರುಣ ಗೌಡ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಕೃಷ್ಣ ಕಾಂಬಳೆ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುರೇಶ ನಾಯ್ಕ, ನಾಗರತ್ನಾ ನಾಯ್ಕ, ಎಸ್.ಎಂ.ಹೊಂಬಳ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.