ಭಟ್ಕಳ-ಭಟ್ಕಳದ ವಯೋವೃದ್ಧೆ ಬಿ ಬಿ ಸಾರಾ ಅವರು ದಿಂಬಿನ ಅಡಿಗೆ ಅಡಗಿಸಿಟ್ಟಿದ್ದ ಚಿನ್ನ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚಿನ್ನ ಕಾಣೆಯಾದ ಬಗ್ಗೆ ಅಜ್ಜಿ ಪರವಾಗಿ ಪೊಲೀಸ್ ದೂರು ದಾಖಲಿಸಿದ್ದ ತಜಮುಲ್ ಹಸನ್ ಬಂಧಿತ ಕಳ್ಳ!
ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ತಜಮುಲ್ ಹಸನ್ ತಾಜ್ ವಿಲ್ಲಾ ಎಂಬ ಮನೆ ನಿರ್ಮಿಸಿಕೊಂಡಿದ್ದಾರೆ. ಆ ಮನೆಯಲ್ಲಿ ಅವರ 92 ವರ್ಷದ ಅಜ್ಜಿ ಬಿ ಬಿ ಸಾರಾ ಸಹ ವಾಸವಾಗಿದ್ದು, ಮಲಗುವ ದಿಂಬಿನ ಅಡಿ ಅವರು ಚಿನ್ನಾಭರಣವಿರಿಸುತ್ತಿದ್ದರು. ಇದರ ಮೇಲೆ ಕಣ್ಣಿಟ್ಟಿದ್ದ ತಜಮುಲ್ ಹಸನ್ ಮಾರ್ಚ 17ರ ಬೆಳಗ್ಗೆ ಎಲ್ಲರೂ ಮಸೀದಿಗೆ ಹೋದಾಗ ಮುಖವಾಡ ಧರಿಸಿ ಮನೆಗೆ ಬಂದು 90 ಗ್ರಾಂ ತೂಕದ 4.50 ಲಕ್ಷ ರೂ ಮೌಲ್ಯದ ಚಿನ್ನ ಕದ್ದಿದ್ದರು.
ಅದಾದ ನಂತರ ಚಿನ್ನ ಕಳ್ಳತನದ ಬಗ್ಗೆ ತಜಮುಲ್ ಹಸನ್ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಸಿಸಿ ಕ್ಯಾಮರಾ ದಾಖಲೆ ಪರಿಶೀಲನೆ ನಡೆಸಿದರು. ಭಟ್ಕಳ ನಗರ ಠಾಣೆ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕರಿಗೆ ಮೂಡಿದ ಅನುಮಾನದಂತೆ ತಜಮುಲ್ ಹಸನ್’ನನ್ನು ವಿಚಾರಿಸಿದಾಗ ಚಿನ್ನ ಕದ್ದ ಕಳ್ಳ ಆತನೇ ಎಂದು ಗೊತ್ತಾಗಿದೆ.
ಕದ್ದ ಚಿನ್ನವನ್ನು ತಾಜಮ್ಮುಲ್ ಹಸನ್ ವ್ಯಾಪಾರಕ್ಕಾಗಿ ಚಿನ್ನದ ಅಂಗಡಿಗೆ ನೀಡಿರುವುದು ಸಹ ಬೆಳಕಿಗೆ ಬಂದಿದೆ. ಪೊಲೀಸರು ತಜಮುಲ್ ಹಸನ್’ನನ್ನು ವಶಕ್ಕೆ ಪಡೆದಿದ್ದಾರೆ.