ಭಟ್ಕಳ -ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಮುರುಡೇಶ್ವರದ ಗುತ್ತಿಗೆದಾರ ಮಂಜುನಾಥ ನಾಯ್ಕ ಅವರಿಗೆ ಮೊಹಮದ್ ಶಬ್ಬೀರ ಎಂಬಾತರು ಮೋಸ ಮಾಡಿದ್ದಾರೆ. ಮೊಹಮದ್ ಶಬ್ಬೀರ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಮುರುಡೇಶ್ವರ ಮಾವಳ್ಳಿ ಬಳಿಯ ಮಂಜುನಾಥ ನಾಯ್ಕ ಅವರು ವಾಸವಾಗಿದ್ದು, ಗುತ್ತಿಗೆ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ಭಟ್ಕಳ ಗುಳ್ಮೆಯ ಬಿಲಾಲಖಂಡ ಬಳಿ ಪೇಂಟಿoಗ್ ಕೆಲಸ ಮಾಡಿಕೊಂಡಿರುವ ಮೊಹಮದ್ ಶಬ್ಬೀರ ಅವರು ಮಂಜುನಾಥ ನಾಯ್ಕರಿಗೆ ಹಣ ಡಬಲ್ ಮಾಡಿಕೊಡುವ ಆಮೀಷ ಒಡ್ಡಿದ್ದರು. ಇದಕ್ಕಾಗಿ ಮೊಹಮದ್ ಶಬ್ಬೀರ 3.25 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು.
ಮೇ 27ರಂದು ಮೊದಲ ಬಾರಿ 2.10 ಲಕ್ಷ ರೂ ಹಣ ಪಡೆದ ಮಹಮದ್ ಶಬ್ಬಿರ್ ಮೇ 29ರಂದು ,ತ್ತೆ 1.15 ಲಕ್ಷ ರೂ ಸ್ವೀಕರಿಸಿದ್ದರು. ಆದರೆ, ಹಣ ಮಾತ್ರ ಡಬಲ್ ಮಾಡಿರಲಿಲ್ಲ. ಕೊಟ್ಟಿರುವ ಹಣವನ್ನು ಮರಳಿಸದೇ ಸತಾಯಿಸುತ್ತಿದ್ದರು. ಹೀಗಾಗಿ ಮಂಜುನಾಥ ನಾಯ್ಕರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದರು. ಆಂಜಿನೇಯ ದೇವಸ್ಥಾನ ಹತ್ತಿರ ಹಣಪಡೆದ ಬಗ್ಗೆ ದಾಖಲೆಗಳನ್ನು ಒದಗಿಸಿದರು.
ಎಸ್ಪಿ ಎಂ ನಾರಾಯಣ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಅವರು ಡಿವೈಎಸ್ಪಿ ಮಹೇಶ್ ಎಂ ಅವರ ಬಳಿ ಈ ಪ್ರಕರಣದ ಬಗ್ಗೆ ವಿಚಾರಿಸಿದರು. ಪಿಎಸ್ಐ ಹಣಮಂತ ಬೀರಾದರ್ ಅವರ ನೇತ್ರತ್ವದಲ್ಲಿ ಹುಡುಕಾಟ ನಡೆಸಿ ಮಹಮದ್ ಶಬ್ಬೀರರನ್ನು ಬಂಧಿಸಿದರು. ಮಹಮದ್ ಶಬ್ಬೀರ್ ಬಳಿಯಿದ್ದ 50 ಸಾವಿರ ರೂ ಹಣವನ್ನು ಪೊಲೀಸರು ವಶಕ್ಕೆಪಡೆದರು. ಪೊಲೀಸ್ ಸಿಬ್ಬಂದಿ ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಸಿದ್ದಪ್ಪ ಕಾಂಬಳೆ, ಪರೀದ್ ಚಿಗರಳ್ಳಿ ಹಾಗೂ ಲೋಕಪ್ಪ ಕತ್ತಿ ಈ ಕಾರ್ಯಾಚರಣೆಯಲ್ಲಿದ್ದರು.