ಶಿರಸಿ-ತರಕಾರಿ ವ್ಯಾಪಾರ, ವೆಲ್ಡಿಂಗ್ ಕೆಲಸ ಹಾಗೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಮೂವರು ಬಕ್ರೀದ್ ಹಬ್ಬದ ವೇಳೆ ಗೋ ಕಳ್ಳತನದ ಮೂಲಕ ಬಹುಬೇಗ ಶ್ರೀಮಂತರಾಗಲು ಉದ್ದೇಶಿಸಿದ್ದರು. ಶಿರಸಿ ಪೊಲೀಸರು ಅದಕ್ಕೆ ತಡೆಯೊಡ್ಡಿ ಆ ಮೂವರನ್ನು ಜೈಲಿಗೆ ಕಳುಹಿಸಿದರು.
ಶಿವಮೊಗ್ಗದ ಭದ್ರಾವತಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಇಮ್ರಾನ್ ಬೇಗ್, ವೆಲ್ಡಿಂಗ್ ಕೆಲಸಗಾರ ನದೀಮ್ ಖಲೀಲ್ ಹಾಗೂ ಕೂಲಿ ಕಾರ್ಮಿಕ ಅಬ್ದುಲ್ ಆಜೀಜ್ ಈಚೆಗೆ ಸ್ಕಾರ್ಫಿಯೋ ಕಾರು ಖರೀದಿಸಿದ್ದರು. ಆ ಕಾರಿನಲ್ಲಿಯೇ ಅವರು ಶಿರಸಿಗೆ ಬಂದಿದ್ದರು. ಕಾರಿನ ನೋಂದಣಿ ಸಂಖ್ಯೆಯನ್ನು ಬದಲಿಸಿ ಶಿರಸಿಯ ಎಲ್ಲಾ ಕಡೆ ಓಡಾಟ ನಡೆಸಿದ್ದರು. ಬೀದಿಯಲ್ಲಿ ಮಲಗುವ ಜಾನುವಾರುಗಳನ್ನು ಲೆಕ್ಕ ಮಾಡಿದ್ದ ಅವರು ಅದನ್ನು ಕದ್ದು ಬಕ್ರೀದ್ ಹಬ್ಬ ಆಚರಿಸಲು ಉದ್ದೇಶಿಸಿದ್ದರು. ಕದ್ದ ಹಸುಗಳ ಮಾಂಸ ಮಾರಾಟ ಮಾಡಿ ಅದರಿಂದ ಕಾಸು ಸಂಪಾದಿಸಲು ಸಂಚು ರೂಪಿಸಿದ್ದರು.
ಐಷಾರಾಮಿ ಕಾರಿನ ನೋಂದಣಿ ಸಂಖ್ಯೆ ಬದಲಿಸಿ ರಾತ್ರಿ ಸಂಚಾರ ನಡೆಸಿದ ಆ ಮೂವರು ಜಾನುವಾರು ಅಪಹರಣದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದವು. ಆ ಪ್ರಕರಣ ಬೆನ್ನತ್ತಿದ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಎಸ್ಪಿ ಎಂ ನಾರಾಯಣ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಜಗದೀಶ ಎಂ ಅವರಿಗೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಕಾರವಾರ ಟೆಕ್ನಿಕಲ್ ಸೆಲ್’ನ ಉದಯ ಗುನಗಾ, ಬಬನ ಕದಂ ಹಾಗೂ ಮಾರುತಿ ಮಳಗಿ ಅವರ ನೆರವು ಪಡೆದು ಶಿವಮೊಗ್ಗದ ಕಡೆ ಮುಖ ಮಾಡಿದರು.
ಅಲ್ಲಿಗೆ ತೆರಳಿದ ಪಿಐ ಮಂಜುನಾಥ ಗೌಡ, ಪಿಎಸ್ಐ ರತ್ನಾ ಕುರಿ ಹಾಗೂ ಮಹಂತೇಶ ಕುಂಬಾರ್ ಅವರಿಗೆ ಭದ್ರಾವತಿಯ ನದೀಮ್ ಮಹಮ್ಮದ ಖಲೀಲ, ಅಬ್ದುಲ್ ಅಜಿಜ್ ಹಾಗೂ ಇಮ್ರಾನ ಮೆಹಬೂಬ್ ಬೇಗ ಎಂಬಾತರು ಸಿಕ್ಕಿ ಬಿದ್ದರು. ಪೊಲೀಸ್ ಸಿಬ್ಬಂದಿ ಮಹಂತೇಶ ಬಾರಕರ್, ಪ್ರಶಾಂತ ಪಾವಸ್ಕರ್, ರಾಮಯ್ಯ ಪೂಜಾರಿ ಆ ಮೂವರನ್ನು ವಿಚಾರಣೆಗೆ ಒಳಪಡಿಸಿದರು. ಪೊಲೀಸ್ ಸಿಬ್ಬಂದಿ ಸಂದೀಪ ನಿಂಬಾಯಿ, ಅಶೋಕ ನಾಯ್ಕ ಹಾಗೂ ಮಧುಕರ ಗಾಂವ್ಕರ್ ಅವರು ಕಾರಿನ ಒಳಗೆ ತಪಾಸಣೆ ನಡೆಸಿದರು. ಆಗ ಅಲ್ಲಿ ಬೇರೆ ಬೇರೆ ನೋಂದಣಿಯ ಎರಡು ವಾಹನ ಸಂಖ್ಯೆಗಳು ಸಿಕ್ಕಿದವು. ಕೆಂಪು ಬಣ್ಣದ ಸ್ಕಾರ್ಪಿಯೋ ಕಾರಿಗೆ ಬೇರೆ ಬೇರೆ ನೋಂದಣಿ ಸಂಖ್ಯೆ ಅಳವಡಿಸಿ ಕಳ್ಳರು ಓಡಾಡುತ್ತಿರುವುದು ಖಚಿತವಾಯಿತು.
ವಿಚಾರಣೆಯನ್ನು ಇನ್ನಷ್ಟು ತೀವೃಗೊಳಿಸಿದಾಗ ಜಾನುವಾರು ಕಳ್ಳತನದ ಕರಾಳ ಮುಖ ಹೊರ ಬಂದಿತು. ಆ ಕಾರಿನಲ್ಲಿ ಕತ್ತಿ, ಹಗ್ಗಗಳು ಸಹ ಪೊಲೀಸರಿಗೆ ಸಿಕ್ಕಿದವು. ಕಳ್ಳರ ಬಳಿಯಿದ್ದ 9 ಸಾವಿರ ರೂ ಹಣ, ಆ ಕಾರು, ನಕಲಿ ನಂಬರ್ ಪ್ಲೇಟ್’ನ್ನು ಪೊಲೀಸರು ವಶಕ್ಕೆಪಡೆದರು.