ಸಿದ್ದಾಪುರ-ಮೊನ್ನೆ ಮಂಗಳವಾರ ಬೆಂಗಳೂರಿಗೆ ಮರಳಿದ್ದ ಸಿದ್ದಾಪುರದ ಅಕ್ಷತಾ ಅವರು ಈ ದಿನ ಶವವಾಗಿ ಊರಿಗೆ ಬಂದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನಪ್ಪಿದ 11 ಜನರಲ್ಲಿ ಅಕ್ಷತಾ (27 ವರ್ಷ) ಸಹ ಒಬ್ಬರು. ಗುರುವಾರ ಸಿದ್ದಾಪುರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.
ಅಕ್ಷತಾ ಪೈ ಮೂಲತಃ ಮಂಗಳೂರಿನ ಮುಲ್ಕಿಯವರು. ಬಾಲ್ಯದಿಂದಲೂ ಅವರು ಪ್ರತಿಭಾವಂತರಾಗಿದ್ದರು. ಸಿಎ ಪರೀಕ್ಷೆಯಲ್ಲಿ ಅವರು ಚಿನ್ನದ ಪದಕಪಡೆದಿದ್ದರು. ಕಳೆದ ಒಂದುವರೆ ವರ್ಷದ ಹಿಂದೆ ಅವರು ಸಾಪ್ಟವೇರ್ ಇಂಜಿನಿಯರ್ ಆಯಿಶ್ ಅವರನ್ನು ಮದುವೆ ಆಗಿದ್ದರು. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಖಾಸಗಿ ಕಂಪನಿ ಒಂದರಲ್ಲಿ ಅಕ್ಷತಾ ಅವರು ಉದ್ಯೋಗ ಮಾಡುತ್ತಿದ್ದರು. ಈಚೆಗೆ ಊರಿಗೆ ಬಂದಿದ್ದ ಈ ದಂಪತಿ ಮೊನ್ನೆ ಮಂಗಳವಾರ ಬೆಂಗಳೂರಿಗೆ ಮರಳಿದ್ದರು.
ಆರ್ಸಿಬಿ ಅಭಿಮಾನಿಯಾಗಿದ್ದ ಅಕ್ಷತಾ ಅವರು ಪತಿಯ ಜೊತೆ ಪಂದ್ಯಾವಳಿ ವೀಕ್ಷಣೆಗೆ ಹೋಗಿದ್ದರು. ಗಂಡ-ಹೆAಡತಿ ಇಬ್ಬರು ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದು, ಒಮ್ಮೆಲೆ ನೂಕು ನುಗ್ಗಲು ಉಂಟಾಯಿತು. ಆ ವೇಳೆ ಅಕ್ಷತಾ ಕೈ ಬಿಡಿಸಿಕೊಂಡರು. ಮುಂದಿನ ಎರಡು ತಾಸುಗಳ ಕಾಲ ಹುಡುಕಾಟ ನಡೆಸಿದರೂ ಅಕ್ಷತಾ ಅವರ ಸುಳಿವು ಸಿಗಲಿಲ್ಲ. ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಯೂ ಅವರು ಕಾಣಲಿಲ್ಲ.
ಅಲ್ಲಿನ ಪೊಲೀಸರ ಬಳಿ ಆಯಿಷ್ ಪತ್ನಿಯ ಬಗ್ಗೆ ವಿಚಾರಿಸಿದ್ದರು. ಪೊಲೀಸರಿಗೆ ಸಹ ಅಲ್ಲಿ ಏನಾಗುತ್ತಿದೆ? ಎಂದು ಗೊತ್ತಾಗುತ್ತಿರಲಿಲ್ಲ. `ನಾವು ನೋಡಿಲ್ಲ’ ಎಂದು ಅವರು ಹೇಳಿದರು. ಕೊನೆಗೆ ಬೋರಿಂಗ್ ಆಸ್ಪತ್ರೆಗೆ ಹೋದಾಗ ಅಲ್ಲಿ ಅಕ್ಷತಾ ಶವವಾಗಿದ್ದರು. ಆಸ್ಪತ್ರೆಗೆ ಬರುವ ಮುನ್ನವೇ ಅಕ್ಷತಾ ಸಾವನಪ್ಪಿದ ಬಗ್ಗೆ ವೈದ್ಯರು ಹೇಳಿದ್ದರು. ಆ ದಂಪತಿ ಧರಿಸಿದ್ದ ಆರ್ಸಿಬಿ ಟೀಶರ್ಟನಿಂದ ಅಕ್ಷತಾ ಶವ ಗುರುತಿಸಲು ಸಾಧ್ಯವಾಯಿತು. ಗುರುವಾರ ಅಕ್ಷತಾ ಅವರ ಶವ ಆಂಬುಲೆನ್ಸ ಮೂಲಕ ಸಿದ್ದಾಪುರಕ್ಕೆ ಬಂದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.