ಸಿದ್ದಾಪುರ-ಪ್ರೀತಿ-ಪ್ರೇಮದ ಹೆಸರಿನಲ್ಲಿ ಹೈಸ್ಕೂಲು ಹುಡುಗಿಯರನ್ನು ಪುಸಲಾಯಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ `ಸ್ಟಿಂಗ್ ಆಪರೇಶನ್’ ಮಾಡಿದ ಕಾಳೆನಹಳ್ಳಿ ಸಂತೋಷ್ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು ಈ ಕರಾಳ ದಂಧೆಯಲ್ಲಿ ಕಾಂಗ್ರೆಸ್ ಮುಖಂಡರ ಹೆಸರು ಹೇಳಿದ್ದು, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
`ಆತ್ಮಹತ್ಯೆಗೆ ಶರಣಾದ ಸಂತೋಷ ನಾಯ್ಕ ವಿಡಿಯೋದಲ್ಲಿ ವಸಂತ ನಾಯ್ಕ ಹಾಗೂ ವಕೀಲ ಎಂ ಎನ್ ನಾಯ್ಕ ಎಂಬ ಹೆಸರು ಹೇಳಿದ್ದು, ವಸಂತ ನಾಯ್ಕ ಎಂಬುವವರು ಈ ತಾಲೂಕಿನಲ್ಲಿ ಸಿಕ್ಕಾಪಟ್ಟೆ ಜನ ಇದ್ದಾರೆ. ಆ ಯುವಕ ವಿಡಿಯೋದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಎಂದು ಹೇಳಿಲ್ಲ. ವಸಂತ ನಾಯ್ಕ ಮನ್ಮನೆ ಎಂದು ಸಹ ಹೇಳಿಲ್ಲ. ಹೀಗಾಗಿ ಸಾವನಪ್ಪಿದ ಸಂತೋಷ ನಾಯ್ಕ ಹೇಳಿದ ವಸಂತ ನಾಯ್ಕ ನಾನು ಅಲ್ಲವೇ ಅಲ್ಲ’ ಎಂದು ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದ್ದಾರೆ. ವಿಚಾರಣೆ ಮುಗಿಸಿ ಬಂದ ವಸಂತ ನಾಯ್ಕ ಅವರು ಪೊಲೀಸರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. `ಯಾರದೋ ಒತ್ತಡಕ್ಕೆ ಮಣಿದು ಪೊಲೀಸರು ನನ್ನನ್ನು ಠಾಣೆಗೆ ಕರೆಯಿಸಿದ್ದಾರೆ. ಸಿದ್ದಾಪುರ ಹಾಗೂ ಯಲ್ಲಾಪುರ ಪಿಐ ಸೇರಿ ನನ್ನನ್ನು ವಿಚಾರಣೆಗೆ ಒಳಪಡಿಸಿದ್ದರು’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ. `ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ ದೊಡ್ಡದಾಗಿದೆ’ ಎಂದು ಅವರು ದೂರಿದ್ದಾರೆ.
`ಸೊರಬದ ಸಂತೋಷ ನಾಯ್ಕ ಫೇಸ್ಬುಕ್ ಮೂಲಕ ನಕಲಿ ಐಡಿ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಹುಡುಗಿ ಫೋಟೋ ಬಳಸಿ ತಂಗಿಗೆ ಆರಾಮಿಲ್ಲ. ತಂದೆಗೆ ಆರಾಮಿಲ್ಲ ಎಂದು ಸುಳ್ಳು ಹೇಳಿ 3 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದ. ಈ ಬಗ್ಗೆ ಲೋಕೇಶ್ ಎಂಬಾತರು ನನಗೆ ಫೋನ್ ಮಾಡಿ ಮಾಹಿತಿ ನೀಡಿದ್ದು, ನಾನು ಪೊಲೀಸ್ ದೂರು ನೀಡುವಂತೆ ತಿಳಿಸಿದ್ದೆ. ಆಗ, ದೂರು ನೀಡಿದರೂ ಪೊಲೀಸರು ಕ್ರಮ ಜರುಗಿಸಿಲ್ಲ. ದೂರು ನೀಡಿ 3 ದಿನ ಆದರೂ ಪೊಲೀಸರು ಸಂತೋಷನನ್ನು ಕರೆಯಿಸಿಲ್ಲ. ವಿಚಾರಣೆಯನ್ನು ನಡೆಸಿಲ್ಲ. ಆಗ ಕ್ರಮ ಜರುಗಿಸಿದ್ದರೆ ಸಂತೋಷ್ ನಾಯ್ಕ ಬದುಕುವ ಸಾಧ್ಯತೆ ಇತ್ತು’ ಎಂದು ವಸಂತ ನಾಯ್ಕ ಹೇಳಿಕೆ ನೀಡಿದ್ದಾರೆ.
ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ!
`ಬಿಜೆಪಿಗರ ಒತ್ತಡಕ್ಕೆ ಮಣಿದು ಪೊಲೀಸರು ನನ್ನ ವಿಚಾರಣೆ ನಡೆಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಸಾವು ಆದ ಕಡೆ ಎಲ್ಲ ಹೋಗಿ ರಾಜಕೀಯ ಮಾಡುತ್ತಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ರಕರಣ ದಾಖಲಿಸುತ್ತಾರೆ. 15 ವರ್ಷಗಳಿಂದ ರಾಜಕೀಯ ಮಾಡುತ್ತಿರುವ ನಾನು ಜನರಿಗೆ ಸಹಾಯ ಮಾಡಿದ್ದೇನೆ. ಅವರ ಹಾಗೇ ದುಡ್ಡು ಮಾಡಿ ಮನೆ ಕಟ್ಟಿಲ್ಲ’ ಎಂದು ವಸಂತ ನಾಯ್ಕ ಹೇಳಿದ್ದಾರೆ. `ಬಿಜೆಪಿಯ ಕೆಜಿ ನಾಯ್ಕ ಸಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅನಧಿಕೃತ ಮನೆ ನಂ, ಅನಧಿಕೃತ ಟೆಂಡರ್ ಮೂಲಕ ಅವರು ಹಣ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ದಾಖಲೆ ಜೊತೆ ಹೋರಾಟ ನಡೆಸುವೆ’ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ದೊಡ್ಡವರ ಬೆಂಬಲ
`ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಅನೇಕ ಮಂತ್ರಿಗಳು-ಶಾಸಕರು ನನ್ನ ಬೆಂಬಲಕ್ಕಿದ್ದಾರೆ. ನಾನು ಮಾಡುವ ಒಳ್ಳೆಯ ಕೆಲಸಕ್ಕೆ ಡಿಕೆ ಶಿವಕುಮಾರ್ ಅವರು ಬೆಂಬಲಿಸುತ್ತಾರೆ. ಮಂಕಾಳು ವೈದ್ಯ, ದೇಶಪಾಂಡೆ, ಹರಿಪ್ರಸಾದ, ಮರ್ಗರೇಟ್ ಆಳ್ವ ಎಲ್ಲರೂ ನನ್ನ ಬೆಂಬಲಕ್ಕಿದ್ದಾರೆ. ನಾನು ತಪ್ಪು ಮಾಡಿದ್ದರೆ ಜೈಲಿಗೆ ಹಾಕಲಿ’ ಎಂದು ಸವಾಲು ಹಾಕಿದರು. `ಅನಾವಷ್ಯಕವಾಗಿ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಿದರೆ ಬಿಜೆಪಿಗರು ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವೆ. ತನ್ನ ಘನತೆಗೆ ಧಕ್ಕೆ ತಂದ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ಧಮೆ ಹಾಕುವೆ’ ಎಂದು ಎಚ್ಚರಿಸಿದರು.