ಅಂಕೋಲಾ, ಜೂನ್ 12: ಅಂಕೋಲಾ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆಯ ನಂತರ ಉಂಟಾಗುತ್ತಿರುವ ಸರಕು ಸಾಗಾಣಿಕೆ ವಾಹನಗಳ ನಿಲುಗಡೆ, ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಕೊರತೆಯ ಕುರಿತು, “ಕರ್ನಾಟಕ ರಣಧೀರರ ವೇದಿಕೆ” ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಂಕೋಲಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಚಂದ್ರಶೇಖರ್ ಮಠಪತಿ ಹಾಗೂ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಾದ ಎಚ್. ಅಕ್ಷತಾರವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರಜ ಪಾಂಡುರಂಗ ನಾಯ್ಕ ತಮ್ಮ ಮನವಿಯಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಪ್ರತಿದಿನ ಎದುರಾಗುತ್ತಿರುವ ಸಮಸ್ಯೆಗಳನ್ನ ವಿವರಿಸಿ, ಸುಗಮ ಸಂಚಾರಕ್ಕಾಗಿ ನಿರ್ದಿಷ್ಟ ಸಮಯ, ಸ್ಥಳ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದರು.
ಸಂಬಂಧಿತ ಅಧಿಕಾರಿಗಳು ಈ ಮನವಿಗೆ ಸ್ಪಂದನೆ ನೀಡಿ, ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹಾಗೂ ಅತಿ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
*ಮನವಿಯಲ್ಲಿ ಪ್ರಸ್ತಾಪಿಸಲಾದ ಪ್ರಮುಖ ಶಿಫಾರಸುಗಳು*
“ಪ್ರತಿದಿನ ಬೆಳಿಗ್ಗೆ 10 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಸರಕು ಸಾಗಾಣಿಕೆ ವಾಹನಗಳು ರಸ್ತೆ ಮೇಲೆ ನಿಂತು ಸಾಮಾನು ಇಳಿಸುವುದರಿಂದ ಸಂಚಾರವು ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ. ತುರ್ತು ಸೇವೆಗಳು ಕೂಡ ಈ ದಟ್ಟಣೆಯಿಂದ ತೊಂದರೆಯೆದುರಿಸುತ್ತಿವೆ. ಅದರೊಂದಿಗೆ ಪಾರ್ಕಿಂಗ್ ವ್ಯವಸ್ಥೆಯ ಕೊರತೆಯಿಂದಾಗಿ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ.” ಆದಕಾರಣ
1) ಸರಕು ಸಾಗಾಣಿಕೆ ವಾಹನಗಳಿಗೆ ಬೆಳಿಗ್ಗೆ 10 ಗಂಟೆಯ ಮೊದಲು ಅಥವಾ ರಾತ್ರಿ ಸಮಯದಲ್ಲಿ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡುವುದು.
2)ಮಾರುಕಟ್ಟೆಯ ಹೊರವಲಯದಲ್ಲಿ ನಿರ್ದಿಷ್ಟ ಲೋಡಿಂಗ್/ಅನ್ಲೋಡಿಂಗ್ ಪ್ರದೇಶವನ್ನು ಗುರುತಿಸುವುದು.
3)ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ವ್ಯವಸ್ಥಿತ ನಿಲುಗಡೆ ಸ್ಥಳಗಳ ಪಟ್ಟಿ ಮಾಡಿ ನಿಯಂತ್ರಣ ಕ್ರಮ ಕೈಗೊಳ್ಳುವುದು.
4)ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಜರುಗಿಸುವುದು.
*ಜಿಲ್ಲಾ ಅಧ್ಯಕ್ಷರು ಈ ಕುರಿತು ಮಾತನಾಡುತ್ತಾ, “ಅಧಿಕಾರಿಗಳು ತಕ್ಷಣ ಸ್ಪಂದನೆ ನೀಡಿದ್ದು ಸಂತಸದ ವಿಚಾರ. ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಅವರು ತೋರಿಸಿರುವ ಆಸಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ,” ಎಂದರು.*
ಅಧಿಕಾರಿಗಳಿಗೆ ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ರಣಧೀರ ವೇದಿಕೆಯ ಉತ್ತರ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಗಾಂವಕರ, ಐಶ್ವರ್ಯ ನಾಯ್ಕ ದಿಲೀಪ್ ನಾಯ್ಕ, ಹರೀಶ್ ನಾಯ್ಕ, ಸುಭಾಷ್ ನಾಯ್ಕ ರವರು ಉಪಸ್ಥಿತರಿದ್ದರು.