ಕುಮಟಾ : ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ 6ನೇ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಕೋನಳ್ಳಿಯ ಶ್ರೀ ವನದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಅದ್ಧೂರಿಯಾಗಿ ನಡೆಯಿತು. ಬ್ರಹ್ಮಾನಂದ ಶ್ರೀಗಳು ಆಮಂತ್ರಣವನ್ನು ಅನಾವರಣಗೊಳಿಸಿದರು.
ನಂತರ ಮಾತಾಡಿದ ಶ್ರೀಗಳು, “ಸಂಸ್ಕಾರ ಮತ್ತು ಜ್ಞಾನವನ್ನು ಬಿತ್ತುವ ಕಾರ್ಯ ಚಾತುರ್ಮಾಸ್ಯ ಮಾಡುತ್ತದೆ. ಸೂಜಿಮೊನೆಯಂತಿರುವ ಆತ್ಮ ನೂರಾರು ಶರೀರ ಪಡೆದು ವ್ಯಾಮೋಹದ ಮುಸುಕಿನಲ್ಲಿ ಸಿಲುಕಿರುತ್ತದೆ. ಆತ್ಮಕ್ಕೆ ಸಂಸ್ಕಾರದ ಮೂಲಕ ಪ್ರಜ್ವಲತೆ ನೀಡಬೇಕು. ಅದು ಧಾರ್ಮಿಕ ಆಚರಣೆಯ ಮೂಲಕವೇ ಸಾಧ್ಯ. ತ್ಯಾಗದಿಂದ ಸೇವೆ ಮಾಡಬೇಕು. ಅದಕ್ಕೆ ಚಾತುರ್ಮಾಸ್ಯ ಕಾರ್ಯಕ್ರಮ ಸದಾವಕಾಶ ಮಾಡಿಕೊಟ್ಟಿದೆ. ಕಲ್ಮಶದಿಂದ ತುಂಬಿದ ಆತ್ಮವನ್ನು ಧಾರ್ಮಿಕ ಕೈಂಕರ್ಯ, ಯೋಗ, ಧ್ಯಾನ ಸಾಧನೆಯಿಂದ ಪವಿತ್ರ ಆತ್ಮವಾಗಿ ಪರಿವರ್ತನೆಯಾಗುವ ಮೂಲಕ ಮನುಷ್ಯ ದೇವನಾಗುತ್ತಾನೆ” ಎಂದು ನುಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, “ಕೋನಳ್ಳಿ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಹಿಂದುಳಿದ ವರ್ಗಗಳ ಜನರೇ ಹೆಚ್ಚಿದ್ದಾರೆ. ಕೋನಳ್ಳಿಯ ಶ್ರೀ ವನದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಜುಲೈ 10ರಿಂದ ಆಗಸ್ಟ್ 20ರವರೆಗೆ ವಿಜೃಂಭಣೆಯಿಂದ ನಡೆಯಲಿರುವ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆಯಿಂದ ಈ ಪ್ರದೇಶ ಅಭಿವೃದ್ಧಿ ಆಗುತ್ತದೆ ಜೊತೆಗೆ ಈ ನೆಲವೂ ಪಾವನವಾಗುತ್ತದೆ” ಎಂದರು.
“ಶ್ರೀಗಳು ಎಲ್ಲ ಸಮಾಜಗಳ ಜೊತೆಗೆ ಆತ್ಮೀಯ ಸಂಬಂಧ ಇಟ್ಟುಕೊಂಡಿರುವುದು ನಮಗೆಲ್ಲ ಹೆಮ್ಮೆ. ನಾನು ಕೂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಕುಮಟಾದಲ್ಲಿ ಗುರುಗಳ ಆಶಯದಂತೆ ಅದ್ದೂರಿಯಾಗಿ ನಡೆಸುವ ಕಾರ್ಯವನ್ನು ಎಲ್ಲರೂ ಸೇರಿ ಯಶಸ್ವಿ ಮಾಡೋಣ” ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಮಾಜಿ ಸಚಿವರಾದ ಶಿವಾನಂದ ನಾಯ್ಕ ಮಾತನಾಡಿ, “ನಮ್ಮ ಜಿಲ್ಲೆಯಲ್ಲಿನ ಶ್ರೀಗಳ ಎರಡನೇ ಚಾತುರ್ಮಾಸ್ಯ ಕುಮಟಾದಲ್ಲಿ ನಡೆಯಲಿದೆ. ಹಿಂದುಳಿದ ಸಮಾಜವು ಧಾರ್ಮಿಕವಾಗಿ ಮುಂದುವರೆಯುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಬಲಗೊಳಿಸುವ ಕಾರ್ಯಕ್ಕೆ ಗುರೂಗಳು ಹೆಜ್ಜೆ ಇಟ್ಟಿದ್ದಾರೆ. ಎಲ್ಲ ಸಮಾಜಗಳಂತೆ ನಾವು ಸರಿಸಮಾನವಾಗಿ ಬೆಳೆಯಬೇಕು. ಹಿಂದುಗಳಾದ ನಾವು ಧಾರ್ಮಿಕವಾಗಿ ಮುಂದುವರೆಯುವ ಜೊತೆಗೆ ಶೈಕ್ಷಣಿಕವಾಗಿಯೂ ಅಭಿವೃದ್ಧಿಯ ಚಿಂತನೆಯನ್ನು ಸಮಾಜ ಮಾಡಬೇಕು” ಎಂದರು.
ಉದ್ಯಮಿ ಮುರಳೀಧರ ಪ್ರಭು ಮಾತನಾಡಿ, “ಶ್ರೀಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಸೇರಿಸುವ ಕೊಂಡಿಯಾಗಿದ್ದಾರೆ. ಆ ಕಾರಣಕ್ಕೆ ಅವರು 1008 ಮಹಾಮಂಡಲೇಶ್ವರರಾಗಿದ್ದಾರೆ. ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆ ಅನಾವರಣವಾಗಿದೆ ಎಂದರೆ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ. ಲೋಕ ಕಲ್ಯಾಣಕ್ಕಾಗಿ ಗುರುಗಳು ಮಾಡುವ ವೃತಾಚರಣೆ ಯಶಸ್ವಿಯಾದರೆ ಅದು ಉತ್ಸವವಾಗುತ್ತದೆ. 42 ದಿನಗಳ ವೃತಾಚರಣೆ ಕುಮಟಾದಲ್ಲಿ ಉತ್ಸವವಾಗಲಿ” ಎಂದರು.
ನಿವೃತ್ತ ಮುಖ್ಯಾಧ್ಯಾಪಕ ಎಂ. ಟಿ. ಗೌಡ ಮಾತನಾಡಿ, “ನಾನು ಶ್ರೀಗಳನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸದೇ ಅವರು ಎಲ್ಲ ಸಮಾಜಗಳನ್ನು ಒಟ್ಟಿಗೆ ಕರೆದೊಯ್ಯುವ ಧಾರ್ಮಿಕ ಶಕ್ತಿಯಾಗಿ ಭಾರತದಾದ್ಯಂತ ಪಸರಿಸಲಿ” ಎಂದು ಹೇಳುವುದರ ಜೊತೆಗೆ ಈ ಹಿಂದಿನ ಆತ್ಮಾನಂದ ಸ್ವಾಮೀಜಿಗೂ ಮತ್ತು ಆದಿಚುಂಚನಗಿರಿ ಮಠಕ್ಕೂ ಇದ್ದ ಅನ್ಯೋನ್ಯತೆ ಮತ್ತು ಗಾಢ ಸಂಬಂಧವನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ್, ಪ್ರಮುಖರಾದ ಹೊನ್ನಪ್ಪ ನಾಯಕ, ಜಿ. ಎಸ್. ಗುನಗಾ, ಆನಂದು ನಾಯ್ಕ, ಗಣೇಶ ಅಡಿಗುಂಡಿ, ಜಗದೀಶ ಹರಿಕಾಂತ, ಸತೀಶ ಚಂದಾವರ್, ಚಾತುರ್ಮಾಸ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್. ಆರ್. ನಾಯ್ಕ (ಕೋನಳ್ಳಿ), ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ (ಕೋಡ್ಕಣಿ), ಹೊನ್ನಾವರದ ನಾಮಧಾರಿ ಪ್ರಮುಖ ವಾಮನ ನಾಯ್ಕ ಇದ್ದರು.
ಚಾತುರ್ಮಾಸ್ಯ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಟಿ. ಟಿ. ನಾಯ್ಕ ಸ್ವಾಗತಿಸಿದರು. ಪೂಜಾ ಸಮಿತಿ ಅಧ್ಯಕ್ಷ ಮಹೇಶ ನಾಯ್ಕ ಆಮಂತ್ರಣ ಪತ್ರಿಕೆ ವಾಚಿಸಿದರು. ವೇದಿಕೆ ಸಮಿತಿಯ ಯಶವಂತ ನಾಯ್ಕ ವಂದಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.