ಶಿರಸಿ-ಶಿರಸಿಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಗುದ್ದಿದೆ. TSS ಆಸ್ಪತ್ರೆಗೆ ದಾಖಲಿಸಿದರೂ ಆ ಬಾಲಕನ ಜೀವ ಉಳಿಯಲಿಲ್ಲ.
ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ರಾಘವೇಂದ್ರ ನಾಯ್ಕ ಕುಟುಂಬದವರು ವಾಸವಾಗಿದ್ದರು. ರಾಘವೇಂದ್ರ ನಾಯ್ಕ ಅವರ ಪುತ್ರ ತನ್ವಿಕ್ ನಾಯ್ಕ (10 ವರ್ಷ) ಸಮೀಪದ ಅಜ್ಜಿಬಳ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದರು. ಜೂನ್ 23ರ ಶಾಲೆ ಮುಗಿದ ನಂತರ ತನ್ವಿಕ್ ನಾಯ್ಕ ಮನೆಗೆ ಮರಳುತ್ತಿದ್ದರು. ತನ್ವಿಕ್ ನಾಯ್ಕ ಅವರು ರಸ್ತೆ ದಾಟುತ್ತಿದ್ದಾಗ ಅಜ್ಜಿಬಳ ಗ್ಯಾರೇಜ್ ಹತ್ತಿರ ಬುಲೇರೋ ಜೀಪಿನ ಹಿಂದಿನ ಭಾಗ ತನ್ವಿಕ್ ಅವರ ಮುಖಕ್ಕೆ ಗುದ್ದಿತು.
ಆ ಬುಲೇರೋ ಜೀಪನ್ನು ಶಿರಸಿ ಕಾಗೇರಿಯ ಕಿರಣ ನಾಯ್ಕ ಅವರು ಓಡಿಸುತ್ತಿದ್ದರು. ತುರ್ತು ಕೆಲಸದ ನಿಮಿತ್ತ ಅವರು ಶಿರಸಿ-ಸಿದ್ದಾಪುರದ ಕಡೆ ವೇಗವಾಗಿ ಹೋಗುತ್ತಿದ್ದರು. ಶಾಲಾ ಬಾಲಕನಿಗೆ ಜೀಪು ಗುದ್ದಿದನ್ನು ಅರಿತ ಅವರು ತಕ್ಷಣ ತಮ್ಮ ವಾಹನ ನಿಲ್ಲಿಸಿದರು. ಗಾಯಗೊಂಡ ತನ್ವಿತ್ ನಾಯ್ಕ ಅವರನ್ನು ಅದೇ ಜೀಪಿನಲ್ಲಿ ಕೂರಿಸಿಕೊಂಡು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ಬಂದರು.
ಆಸ್ಪತ್ರೆಯ ವೈದ್ಯರು ತನ್ವಿತ್ ನಾಯ್ಕ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. 15ನಿಮಿಷದ ಒಳಗೆ ಆಸ್ಪತ್ರೆಗೆ ಬಂದರೂ ತನ್ವಿತ್ ನಾಯ್ಕ ಬದುಕಲಿಲ್ಲ. ಮಂಗಳವಾರ ಮೀಸೆಗುಂದಿಯಲ್ಲಿ ತನ್ವಿತ್ ಅಂತ್ಯಕ್ರಿಯೆ ನಡೆಯಿತು. ಶಾಲಾ ಮಕ್ಕಳು-ಮುಖ್ಯಾಧ್ಯಾಪಕರು ಈ ವೇಳೆ ಕಣ್ಣೀರಾದರು. ತನ್ವಿತ್ ಪಾಲಕರ ಜೊತೆ ವಿದ್ಯಾರ್ಥಿಯನ್ನು ಕಳೆದುಕೊಂಡ ಶಿಕ್ಷಕರು ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತರು.
ಅಪಘಾತದ ಬಗ್ಗೆ ಸೊಸೈಟಿಯಲ್ಲಿ ಕ್ಲರ್ಕ ಆಗಿರುವ ರಾಜು ಗೌಡ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.