ಹೊನ್ನಾವರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿರುವ ಶಿರಸಿ ತಾಲ್ಲೂಕಿನ ಸೊಂಡ್ಲೆಬೈಲು ನಿವಾಸಿ ರವೀಶ ಹೆಗಡೆ ಅವರನ್ನು ವಂಚನೆ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ತಮನ್ನು ಪತ್ರಕರ್ತ ಎಂದು ಪರಿಚಯಿಸಿಕೊಂಡು ‘ಸ್ವಸ್ತಿಕ್ ಮೀಡಿಯಾ’ ಎಂಬ ಹೆಸರಿನಲ್ಲಿ ಜಾಲತಾಣಗಳಲ್ಲಿ ಲೇಖನ ಪ್ರಕಟಿಸುತ್ತಿದ್ದ ಅವರ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿರುವುದು ತಿಳಿದುಬಂದಿದೆ.
ಇತ್ತೀಚೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದ ಹಿನ್ನೆಲೆ ಅವರು ಬಂಧನಕ್ಕೊಳಗಾಗಿದ್ದಾರೆ. ಕಡಿಮೆ ಬೆಲೆಯಲ್ಲಿ ಕಾರು ಒದಗಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡಿರುವ ಆರೋಪದಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹೋನ್ನಾವರದ ಹೊಸಾಕುಳಿ ನಿವಾಸಿ ಗಣೇಶ್ ಹೆಗಡೆ ಅವರಿಗೆ ಕಾರು ಕೊಡಿಸುವುದಾಗಿ ಹೇಳಿ ಸುಮಾರು ₹5.55 ಲಕ್ಷಕ್ಕೂ ಅಧಿಕ ಹಣ ಪಡೆದು, ನಂತರ ಕಾರು ಒದಗಿಸದೇ ಹಾಗೂ ಹಣವನ್ನು ಮರಳಿಸದೇ ವಂಚನೆ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ, ಬೆಂಗಳೂರಿನಲ್ಲಿ ಅಡಗಿದ್ದ ರವೀಶ ಹೆಗಡೆ ಅವರನ್ನು ವಿಶೇಷ ತಂಡದ ಸಹಾಯದಿಂದ ವಶಕ್ಕೆ ಪಡೆದಿದ್ದಾರೆ.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ಮುಂದುವರಿದಿದೆ.
