ಭಟ್ಕಳ: ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಟಿಸಿರುವ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ನೇಮಕಾತಿ) (ವಿಶೇಷ) ನಿಯಮಗಳು–2026ರ ಕರಡು ಅಧಿಸೂಚನೆ ಕುರಿತು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಎಐಐಟಿಎ) ಕರ್ನಾಟಕ ರಾಜ್ಯ ಘಟಕ ಹಲವು ಸಲಹೆಗಳು ಹಾಗೂ ಆಕ್ಷೇಪಣೆಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ವಿಶೇಷವಾಗಿ ಪ್ರೌಢಶಾಲಾ ಗಣಿತ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಸೇರಿಸುವಂತೆ ಸಂಘ ಒತ್ತಾಯಿಸಿದೆ.
ಎಐಐಟಿಎ ರಾಜ್ಯಾಧ್ಯಕ್ಷ ಮೊಹಮ್ಮದ್ ರಝಾ ಮಾನ್ವಿ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ಮನವಿಯಲ್ಲಿ, ಜುಲೈ 14ರಂದು ಪ್ರಕಟವಾದ ಕರಡು ನಿಯಮಗಳನ್ನು ಸ್ವಾಗತಿಸುವುದಾಗಿ ತಿಳಿಸಿದರೂ, ಕೆಲವು ಪ್ರಮುಖ ಅಂಶಗಳಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಘದ ಪ್ರಕಾರ, ಕರಡು ನಿಯಮಗಳ ಅನುಸೂಚಿ–1ರಲ್ಲಿ ಪ್ರೌಢಶಾಲಾ ಸಹಾಯಕ ಶಿಕ್ಷಕರ ವೃಂದಕ್ಕೆ ಕಲೆ, ಜೈವಿಕ ವಿಜ್ಞಾನ ಮತ್ತು ಭಾಷಾ ಶಿಕ್ಷಕರ ಹುದ್ದೆಗಳನ್ನು ಸೇರಿಸಲಾಗಿದೆ. ಆದರೆ ಗಣಿತ ಸಹಾಯಕ ಶಿಕ್ಷಕರ ಹುದ್ದೆಗಳು ಪಟ್ಟಿಯಲ್ಲಿ ಕಾಣಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಅರ್ಹ ಗಣಿತ ಪದವೀಧರರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವುದರ ಜೊತೆಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಇರುವ ಗಣಿತ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸಂಘ ತಿಳಿಸಿದೆ. ಹೀಗಾಗಿ ಖಾಲಿ ಇರುವ ಗಣಿತ ಶಿಕ್ಷಕರ ಹುದ್ದೆಗಳನ್ನೂ ನೇಮಕಾತಿ ಪ್ರಕ್ರಿಯೆಗೆ ಸೇರಿಸಿ ಅಗತ್ಯ ತಿದ್ದುಪಡಿ ಅಧಿಸೂಚನೆ ಹೊರಡಿಸಬೇಕೆಂದು ಮನವಿ ಮಾಡಲಾಗಿದೆ.
ನೇಮಕಾತಿ ವಿಧಾನದಲ್ಲಿಯೂ ಕೆಲವು ಬದಲಾವಣೆಗಳನ್ನು ಸಂಘ ಸೂಚಿಸಿದೆ. ಪ್ರೌಢಶಾಲಾ ಸಹಾಯಕ ಶಿಕ್ಷಕರ ಆಯ್ಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಶೇ.85 ಮತ್ತು ಶೈಕ್ಷಣಿಕ ಅರ್ಹತೆಗೆ ಶೇ.13 ಅಂಕಗಳನ್ನು ನಿಗದಿಪಡಿಸಿರುವ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಶೈಕ್ಷಣಿಕ ಸಾಧನೆಗೂ ಹೆಚ್ಚಿನ ಮಹತ್ವ ನೀಡಬೇಕೆಂದು ಕೋರಲಾಗಿದೆ. ಇದೇ ವೇಳೆ 6ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಸಿಇಟಿಗೆ ಶೇ.70 ಹಾಗೂ ಟಿಇಟಿಗೆ ಶೇ.20 ಅಂಕಗಳನ್ನು ನಿಗದಿಪಡಿಸಿರುವ ಕ್ರಮವನ್ನು ಸಂಘ ಸ್ವಾಗತಿಸಿದೆ.
ಕಂಪ್ಯೂಟರ್ ವಿಜ್ಞಾನ ಶಿಕ್ಷಕರು ನೇಮಕವಾದ ನಂತರ ಐದು ವರ್ಷಗಳೊಳಗೆ ಬಿ.ಎಡ್. ಮತ್ತು ಟಿಇಟಿ ಅರ್ಹತೆ ಪಡೆಯಲು ಅವಕಾಶ ಕಲ್ಪಿಸಿರುವ ನಿಯಮವನ್ನು ಸಂಘ ಬೆಂಬಲಿಸಿದೆ. ಜೊತೆಗೆ, ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ವಿಳಂಬವಾಗಿರುವುದರಿಂದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ಎರಡು ವರ್ಷಗಳ ವಯೋಮಿತಿ ಸಡಿಲಿಕೆ ನೀಡುವಂತೆ ಸರ್ಕಾರವನ್ನು ಕೋರಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮವನ್ನು ಪರೀಕ್ಷೆಗೆ ಕನಿಷ್ಠ 45 ದಿನಗಳ ಮುಂಚಿತವಾಗಿ ಪ್ರಕಟಿಸಬೇಕು. ಇದರಿಂದ ಅಭ್ಯರ್ಥಿಗಳು ಸೂಕ್ತವಾಗಿ ಸಿದ್ಧತೆ ನಡೆಸಲು ಅನುಕೂಲವಾಗುತ್ತದೆ ಎಂದು ಸಂಘ ತನ್ನ ಮನವಿಯಲ್ಲಿ ಉಲ್ಲೇಖಿಸಿದೆ.
ಉರ್ದು ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ಎಐಐಟಿಎ ಆಕ್ಷೇಪ ವ್ಯಕ್ತಪಡಿಸಿದೆ. ಎಚ್ಎಸ್ಟಿಆರ್ ನೇಮಕಾತಿಯಲ್ಲಿ ಉರ್ದು ಮಾಧ್ಯಮದ ಸಮಾಜ ವಿಜ್ಞಾನ ಹಾಗೂ ಉರ್ದು ಭಾಷಾ ಶಿಕ್ಷಕರ ಹುದ್ದೆಗಳ ಕುರಿತು ಸ್ಪಷ್ಟ ಉಲ್ಲೇಖ ಇಲ್ಲದಿರುವುದು ಕಳವಳಕಾರಿ ಎಂದು ಹೇಳಿದೆ. ಈ ಹಿಂದೆ ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಉರ್ದು ಭಾಷೆಯಲ್ಲೇ ಪರೀಕ್ಷೆ ಬರೆಯುವ ಅವಕಾಶವಿದ್ದರೆ, ಹೊಸ ಕರಡು ನಿಯಮದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಅದೇ ರೀತಿ, ಈ ಹಿಂದೆ ಉರ್ದು ಭಾಷಾ ಶಿಕ್ಷಕರ ನೇಮಕಾತಿಯಲ್ಲಿ 100 ಅಂಕಗಳ ಉರ್ದು ಭಾಷಾ ಪ್ರಾವೀಣ್ಯ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಹೊಸ ಕರಡು ನಿಯಮದಲ್ಲಿ ಅದರ ಬದಲಿಗೆ 50 ಅಂಕಗಳ ಕನ್ನಡ ಮತ್ತು 50 ಅಂಕಗಳ ಇಂಗ್ಲಿಷ್ ಪರೀಕ್ಷೆ ನಿಗದಿಪಡಿಸಿರುವುದು ಉರ್ದು ಭಾಷೆಯ ಮಹತ್ವವನ್ನು ಕಡಿಮೆ ಮಾಡಿದಂತಾಗಿದೆ ಎಂದು ಸಂಘ ಅಭಿಪ್ರಾಯ ವ್ಯಕ್ತಪಡಿಸಿದೆ.
ಸರ್ಕಾರ ಈ ಎಲ್ಲ ಸಲಹೆಗಳು ಹಾಗೂ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿ, ಗಣಿತ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಗೆ ಸೇರಿಸುವುದರ ಜೊತೆಗೆ ಉರ್ದು ಮಾಧ್ಯಮದ ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ಭಾಷಾ ಹಕ್ಕುಗಳನ್ನು ಸಮರ್ಪಕವಾಗಿ ರಕ್ಷಿಸುವ ಕ್ರಮ ಕೈಗೊಳ್ಳಬೇಕು ಎಂದು ಎಐಐಟಿಎ ರಾಜ್ಯಾಧ್ಯಕ್ಷ ಮೊಹಮ್ಮದ್ ರಝಾ ಮಾನ್ವಿ ಮನವಿ ಮಾಡಿದ್ದಾರೆ.

