ಹಳಿಯಾಳ: ಹಿರಿಯ ರಾಜಕಾರಣಿ ಹಾಗೂ ಹಳಿಯಾಳ–ಜೋಯಿಡಾ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸರ್ಕಾರ ಮರುನೇಮಕ ಮಾಡಿದೆ.
ಸರ್ಕಾರ ಬುಧವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ದೇಶಪಾಂಡೆ ಅವರು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹುದ್ದೆಗೆ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನವನ್ನೂ ಕಲ್ಪಿಸಲಾಗಿದೆ.

ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಸರ್ಕಾರಿ ಕಾರ್ಯವಿಧಾನಗಳ ಪರಿಣಾಮಕಾರಿತ್ವ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಶಿಫಾರಸುಗಳನ್ನು ನೀಡುವ ಮಹತ್ವದ ಜವಾಬ್ದಾರಿ ಆಡಳಿತ ಸುಧಾರಣಾ ಆಯೋಗದ್ದಾಗಿದೆ. ಇದೇ ಆಯೋಗದ ಅಧ್ಯಕ್ಷರಾಗಿ ದೇಶಪಾಂಡೆ ಅವರು ಈ ಹಿಂದೆ ಕೂಡ ಕಾರ್ಯನಿರ್ವಹಿಸಿದ್ದರು.
ರಾಜ್ಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿರುವ ದೇಶಪಾಂಡೆ ಅವರು ಒಂಬತ್ತನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ವಿವಿಧ ಮುಖ್ಯಮಂತ್ರಿಗಳ ಅವಧಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು, ಆಡಳಿತ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅನುಭವಿ ನಾಯಕರೆಂದು ಗುರುತಿಸಿಕೊಂಡಿದ್ದಾರೆ.
ಈ ಹಿಂದೆ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಹಲವು ವರದಿಗಳನ್ನು ಸಲ್ಲಿಸಿದ್ದು, 2025ರ ಅಂತ್ಯದ ವೇಳೆಗೆ 10ನೇ ವರದಿಯನ್ನೂ ಸಲ್ಲಿಸಿತ್ತು.ಇತ್ತೀಚಿನ ಸಚಿವ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ದೇಶಪಾಂಡೆ ಅವರ ಹೆಸರೂ ಸಚಿವ ಸ್ಥಾನದ ಚರ್ಚೆಯಲ್ಲಿ ಕೇಳಿಬಂದಿತ್ತು. ಇದೀಗ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನವನ್ನು ಮತ್ತೆ ನೀಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

