ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಟೈಗರ್ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ.) ಆಯೋಜಿಸಿರುವ 5ನೇ ವರ್ಷದ ‘ಅಬ್ಬರದ ಉಡುಪಿ ಪಿಲಿನಲಿಕೆ’ ಸಾಂಸ್ಕೃತಿಕ ಕಾರ್ಯಕ್ರಮವು ಸೆಪ್ಟೆಂಬರ್ 4ರಂದು ಕುಂಜಿಬೆಟ್ಟಿನಲ್ಲಿ ನಡೆಯಲಿದೆ.

ಕುಂಜಿಬೆಟ್ಟು ಮೀನು ಮಾರುಕಟ್ಟೆ ಸಮೀಪ ನಿರ್ಮಿಸಲಾಗುವ ವಿಶೇಷ ವೇದಿಕೆಯಲ್ಲಿ ಸಂಜೆ 4.30ರಿಂದ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಆಹ್ವಾನಿತ ವಿವಿಧ ತಂಡಗಳ ಭಾಗವಹಿಸುವಿಕೆಯಲ್ಲಿ ಸಾಂಪ್ರದಾಯಿಕ ಹುಲಿವೇಷ ಹಾಗೂ ಕಿನ್ನಿಪಿಲಿ ಸ್ಪರ್ಧೆ ಮತ್ತು ಪ್ರದರ್ಶನಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಶಶಿರಾಜ್ ಕುಂದರ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ನಟ ಟೆನ್ನಿಸ್ ಕೃಷ್ಣ, ನಟ ಅರ್ಜುನ್ ಕಾಪಿಕಾಡ್, ನಟಿ ಸುಕೃತ ವಾಗ್ಲೆ, ಜ್ಯೂನಿಯರ್ ಮಾಡೆಲ್ ಸಚಿತಾ ರಾವ್, ಮಾಡೆಲ್ ಸ್ಪೂರ್ತಿ ಶೆಟ್ಟಿ, ನಟಿ ರೂಪಾ ವರ್ಕಾಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ‘ಟಾಸ್’ ಹಾಗೂ ‘ಬನ’ ಚಿತ್ರತಂಡಗಳ ಸದಸ್ಯರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಸಮಾಜ ಸೇವೆಯಲ್ಲೂ ಟೈಗರ್ ಫ್ರೆಂಡ್ಸ್ ಸಕ್ರಿಯ
ಟೈಗರ್ ಫ್ರೆಂಡ್ಸ್ ತಂಡವು ಸುಮಾರು ಒಂದು ದಶಕದಿಂದ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಣೆ, ರಕ್ತದಾನ ಕಾರ್ಯಕ್ರಮ, ಅಂಗನವಾಡಿಗಳಿಗೆ ಅಗತ್ಯ ವಸ್ತುಗಳ ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಸಂಸ್ಥೆ ನಡೆಸುತ್ತಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನದ ಮೂಲಕ ಗೌರವಿಸುವ ಕಾರ್ಯವೂ ನಡೆಯುತ್ತಿದೆ. ಅನಾಥ ಮಕ್ಕಳ ಶಿಕ್ಷಣ ವೆಚ್ಚಕ್ಕೆ ನೆರವು ನೀಡುವ ಮೂಲಕವೂ ಟ್ರಸ್ಟ್ ಶಿಕ್ಷಣ ಕ್ಷೇತ್ರಕ್ಕೆ ಸಹಕಾರ ನೀಡುತ್ತಿದೆ.
ಹುಲಿವೇಷ ಪರಂಪರೆ ಉಳಿಸಿ ಬೆಳೆಸುವ ಉದ್ದೇಶ
ಶಶಿರಾಜ್ ಕುಂದರ್ ಅವರ ನೇತೃತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ‘ಟೈಗರ್ ಫ್ರೆಂಡ್ಸ್ ಉಡುಪಿ’ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ‘ಅಬ್ಬರದ ಉಡುಪಿ ಪಿಲಿನಲಿಕೆ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ತುಳುನಾಡಿನ ಸಾಂಪ್ರದಾಯಿಕ ಕಲೆಯಾದ ಹುಲಿವೇಷವನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ, ಅದರ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಳೆದ ವರ್ಷದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ದಿವ್ಯಹಸ್ತದಿಂದ ಸಂಘವನ್ನು ‘ಟೈಗರ್ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ.)’ ಎಂದು ಅಧಿಕೃತವಾಗಿ ಅನಾವರಣಗೊಳಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾರ್ವಜನಿಕರು ಹಾಗೂ ಗಣ್ಯರ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ ಎಂದು ಟ್ರಸ್ಟ್ ಮನವಿ ಮಾಡಿದೆ.ಪತ್ರಿಕಾಗೋಷ್ಠಿಯಲ್ಲಿ ಟೈಗರ್ ಫ್ರೆಂಡ್ಸ್ನ ಅಧ್ಯಕ್ಷ ಶಶಿರಾಜ್ ಕುಂದರ್, ಹರೀಶ್ ಕುಮಾರ್, ಭೋಜ ಶೇರಿಗಾರ್, ಹರೀಶ್ ಪೂಜಾರಿ ಹಾಗೂ ರೂಪೇಶ್ ಕಲ್ಮಾಡಿ ಉಪಸ್ಥಿತರಿದ್ದರು.

