
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣಪತಿ ವಿಸರ್ಜನೆಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲೇ ಗಣಪತಿ ಪೆಂಡಾಲ್ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ವರದಿಯಾಗಿದೆ. ಇತ್ತೀಚಿನ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ನಡುವೆಯೇ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಭಟ್ಕಳ ನಗರದ ತಾಲೂಕು ರಿಕ್ಷಾ ಚಾಲಕ–ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿದ್ದ ಗಣಪತಿ ಪೆಂಡಾಲ್ನ ಹಿಂಭಾಗದಿಂದ ಕಲ್ಲುಗಳನ್ನು ತೂರಲಾಗಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ದೊರೆತ ತಕ್ಷಣ ಭಟ್ಕಳ ಶಹರಾ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಪೊಲೀಸರಿಂದ ಸ್ಥಳ ಪರಿಶೀಲನೆ, ತನಿಖೆ ಆರಂಭ
ಕಲ್ಲುತೂರಾಟದ ಕುರಿತು ಟ್ರಸ್ಟ್ನ ಅಧ್ಯಕ್ಷ ಮಂಜುನಾಥ ಗಣಪತಿ ನಾಯ್ಕ ಅವರು ಪೊಲೀಸ್ ಅಧಿಕಾರಿಗಳಿಗೆ ದೂರು/ಮನವಿ ಸಲ್ಲಿಸಿದ್ದಾರೆ. ಕೃತ್ಯಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಕಲ್ಲುತೂರಾಟದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ನಾಲ್ಕು ಗಣಪತಿ ಮೂರ್ತಿಗಳ ವಿಸರ್ಜನೆ
ಭಟ್ಕಳ ನಗರದಲ್ಲಿ ಇಂದು ನಾಲ್ಕು ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಿದೆ.ನಗರದ ಸೂಕ್ಷ್ಮ ಪ್ರದೇಶಗಳು, ಪ್ರಮುಖ ರಸ್ತೆಗಳು, ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗಗಳು ಹಾಗೂ ಜನಸಂದಣಿ ಹೆಚ್ಚಾಗುವ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮೆರಾಗಳ ಮೂಲಕವೂ ನಗರದ ವಿವಿಧ ಭಾಗಗಳ ಮೇಲೆ ನಿಗಾ ಇರಿಸಲಾಗಿದೆ.
ವಿವಿಧ ಪೊಲೀಸ್ ಪಡೆಗಳ ನಿಯೋಜನೆ
ಭದ್ರತಾ ವ್ಯವಸ್ಥೆಯ ಭಾಗವಾಗಿ ಡಿಎಆರ್ ಮತ್ತು ಕೆಎಸ್ಆರ್ಪಿ ಸ್ಟ್ರೈಕಿಂಗ್ ಫೋರ್ಸ್ನ ಐದು ತುಕಡಿಗಳು, ಎಸ್ಎಎಫ್ನ ಒಂದು ಕಂಪನಿಯ 21 ಸಿಬ್ಬಂದಿ ಹಾಗೂ ಆರ್ಎಎಫ್ನ ಒಂದು ಕಂಪನಿಯ 136 ಸಿಬ್ಬಂದಿಯನ್ನು ಒಳಗೊಂಡಂತೆ ಹೆಚ್ಚಿನ ಪ್ರಮಾಣದ ಪೊಲೀಸ್ ಪಡೆಯನ್ನು ಭಟ್ಕಳದಲ್ಲಿ ನಿಯೋಜಿಸಲಾಗಿದೆ.
