ಭಟ್ಕಳ : ವೀರಲೋಕ ಪ್ರಕಾಶನ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕಾ ಘಟಕ ಮತ್ತು ಡಾ.ಸಯ್ಯದ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕಥಾ ಕಮ್ಮಟಕ್ಕೆ ದೇಸಿ ಜಗಲಿ ಕಥಾ ಕಮ್ಮಟದ ಜಿಲ್ಲಾ ಸಂಯೋಜಕರಾದ ಡಾ.ಸಯ್ಯದ್ ಜಮೀರುಲ್ಲ ಷರೀಫ್ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಕಮ್ಮಟದ ಮೂಲಕ ರಾಜ್ಯದಾದ್ಯಂತ ಗ್ರಾಮೀಣ ಪ್ರತಿಭೆಗಳಿಗೆ ಕಥೆ ಬರೆಯಲು ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ಸೂಚನೆ, ಮಾರ್ಗದರ್ಶನ ನೀಡುವುದು ಆ ಮೂಲಕ ಕಥೆ ಬರೆಯುವಂತೆ ಪ್ರೇರೇಪಿಸುವುದು ಮುಖ್ಯ ಉದ್ದೇಶ. ಇಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಮುಂದಿನ ಹಂತದಲ್ಲಿ
ಜನವರಿ ೨೪ ಕ್ಕೆ ಬೆಂಗಳೂರಿನಲ್ಲಿ ಹಿರಿಯ ಸಾಹಿತಿಗಳಿಂದ ಮತ್ತಷ್ಟು ಮಾರ್ಗದರ್ಶನ ನೀಡಲಾಗುವುದು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ನಾಮಂಕಿತ ಕಥೆಗಾರ ಶ್ರೀಧರ್ ಬಳಗಾರ್ ವಹಿಸಿ ದೇಸಿ ಜಗಲಿ ಎಂಬ ಹೆಸರೇ ತುಂಬ ವಿಶೇಷವಾದುದು. ಕಥೆ ಹುಟ್ಡುವುದೇ ಜಗಲಿಯಲ್ಲಿ. ಇಂದಿನ ಇಂಗ್ಲೀಷ ಮನೆಗಳಲ್ಲಿ ಕಥೆ ಹುಟ್ಟುವುದಿಲ್ಲ.ಕೇವಲ ಮಾಹಿತಿ ಹುಟ್ಟುತ್ತದೆ. ಏಕೆಂದರೆ ಅಲ್ಲಿ ಜಗಲಿಯೇ ಮಾಯವಾಗಿದೆ.ಎಲ್ಲರ ಮನೆಗಳಲ್ಲಿ ಪುಸ್ತಕಗಳಿಲ್ಲ. ಸುದ್ದಿ ಸಮಾಚಾರ ಇದೆ.ಮಾಹಿತಿಗಳ ವ್ಯಾಪಾರೀಕರಣವು ಮಣ್ಣಿನೊಂದಿಗೆ, ಮಕ್ಕಳೊಂದಿಗೆ,ಮನೆಯೊಳಗೆ ಪರಸ್ಪರ ಸಂಬಂಧಗಳನ್ನು ಕಟ್ಟಲಾರದು. ಆದರೆ ಜಗಲಿ ಸಂಬಂಧಗಳನ್ನು ಕಟ್ಟುತ್ತದೆ ಎಂದು ತಿಳಿಸುತ್ತಾ ಕಥೆಯ ಕಟ್ಡುವಿಕೆಗೆ ಬೇಕಾದ ಮೂಲಭೂತ ತಿಳಿವಳಿಕೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ.ಸಯ್ಯದ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ
ದ ಅಧ್ಯಕ್ಷ ಪಿ.ಆರ್.ನಾಯ್ಕ ಮಾತನಾಡಿದರು. ಭಟ್ಕಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದ್ದರು.ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಸ್ವಾಗತಿಸಿ ನಿರ್ವಹಿಸಿದರು. ಹೊನ್ನಾವರ ತಾಲೂಕಾ ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಗಳು ಪೂರ್ಣಿಮಾ ನಾಯ್ಜ, ಪ್ರೋ.ಆರ್.ಎಸ್.ನಾಯ್ಕ, ಬಾಲು ಪಟಗಾರ ಕುಮಟ, ಡಾ.ಶ್ರೀಧರ ಉಪ್ಪಿನ ಗಣಪತಿ, ಮಾನಾಸುತ ಶಂಭು ಹೆಗಡೆ, ಎಂ.ಡಿ.ಪಕ್ಕಿ, ಹಾಗೂ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

