ಸರಾಯಿ ಕುಡಿದು ಸರ್ಕಾರಿ ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆಯಲ್ಲಿ ಡ್ಯೂಟಿ ಟೇಬಲ್ ಮೇಲೆ ಮಲಗಿದ ಡಾಕ್ಟರ್
ತಿಪಟೂರು-ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಕುಡಿದು ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಂತ ವಿಭಾಗದ ಡಾ.ಜಯಪ್ರಕಾಶ್ ಸೋಮವಾರ ಮಧ್ಯಾಹ್ನ ಹೊರ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದ ವೇಳೆ ಮದ್ಯಪಾನ ಮಾಡಿ ಟೇಬಲ್ ಮೇಲೆ ಕಾಲಿಟ್ಟು ಕುರ್ಚಿಯಲ್ಲಿಯೇ ಮಲಗಿದ್ದರು.
ಮಾತನಾಡಲು ಪ್ರಯತ್ನಿಸಿದ ರೋಗಿಗಳನ್ನು ಹೊರ ಹೋಗುವಂತೆ ವೈದ್ಯ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಚಿಕಿತ್ಸೆಗೆ ಬಂದವರೊಬ್ಬರು ಮೊಬೈಲ್ನಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ಮೊದಲು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈ ವೈದ್ಯ ಮದ್ಯಪಾನ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದರು. ವರ್ಷದ ಹಿಂದೆ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು.
ಘಟನೆಯ ಬಗ್ಗೆ ಡಿಎಚ್ಒ ಡಾ.ಡಿ.ಎನ್. ಮಂಜುನಾಥ್ ವೈದ್ಯರ ವರ್ತನೆಯನ್ನು ಆರೋಗ್ಯ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಕುರಿತು ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.