ಭಟ್ಕಳ: ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಕೃಷ್ಣ – ರಾಧೆ, ಯಶೋಧ – ಕೃಷ್ಣ ಸ್ಪರ್ಧೆ ಹಾಗೂ ಭಗವದ್ಗೀತಾ ಸ್ಪರ್ಧಾ ಕಾರ್ಯಕ್ರಮವು ಇಲ್ಲಿನ ಸೊನಾರಕೇರಿಯ ಶ್ರೀ ಗಣಪತಿ ಶ್ರೀ ಲಕ್ಸ್ಮಿ ವೆಂಕಟರಮಣ ದೇವಸ್ಥಾನದ ದೈವಜ್ಞ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್. ಪಿ ಶೇಟ್
ಉದ್ಘಾಟಿಸಿದರು. ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಮಕ್ಕಳಲ್ಲಿ ಸಂಸ್ಕಾರ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರಲ್ಲದೇ ಹಬ್ಬಗಳ ಸಂದರ್ಭದಲ್ಲಿ ನಮ್ಮ ಪರಂಪರೆಯನ್ನು ಪರಿಚಯಿಸುವ ಕಾರ್ಯವೂ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ನುಡಿದರು. ಇನ್ನೋರ್ವ ಅತಿಥಿ ಸಾಹಿತಿ ಶ್ರೀಧರ ಶೇಟ್ ಶಿರಾಲಿ ಮಾತನಾಡಿ ಹೆಣ್ಣೊಂದು ಕಲಿತರೆ ಇಡೀ ಕುಟುಂಬವೇ ಕಲಿತಂತೆ ಎಂಬ ಮಾತಿಗೆ ಅನುಗುಣವಾಗಿ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮಕ್ಕಳಿಗೆ ದಾಟಿಸುವ ಉತ್ತಮ ಕಾರ್ಯಕ್ರಮ ಸಂಘಟಿಸುವ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರು ಅಭಿನಂದನಾರ್ಹರು ಎಂದು ನುಡಿದರು. ತೀರ್ಪುಗಾರರಾಗಿ ಉಪಸ್ಥಿತರಿದ್ದ ಶಿಕ್ಷಕ ಸುರೇಶ ಮುರುಡೇಶ್ವರ ಮಾತನಾಡಿದರು.
ವೇದಿಕೆಯಲ್ಲಿ ದೈವಜ್ಞ ಸಮಾಜದ ಹಿರಿಯರಾದ ಸದಾನಂದ ರಾಯ್ಕರ್, ದೈವಜ್ಞ ಮಂಡಳಿ ಸದಸ್ಯ ಮಾರುತಿ ಶೇಟ್, ಮಹಿಳಾ ಮಂಡಳಿ ಸದಸ್ಯೆ ಶೀಲಾ ಸುಧಾಕರ ಶೇಟ್,
ದೈವಜ್ಞ ಯುವಕ ಮಂಡಳಿ ಅಧ್ಯಕ್ಷ ಅಣ್ಣಪ್ಪ ಶೇಟ್, ದೈವಜ್ಞ ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಶೇಟ್ ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳ ಕೃಷ್ಣ ರಾಧೆ, ಯಶೋಧಾ ಕೃಷ್ಣ ಸ್ಪರ್ಧೆಯಲ್ಲಿ ತಮ್ಮ ಮಕ್ಕಳೊಂದಿಗೆ ತಾಯಂದಿರು ಉತ್ಸಾಹದಿಂದ ಪಾಲ್ಗೊಂಡರು. ಕಿರಿಯ ಹಾಗೂ ಹಿರಿಯ ವಿಭಾಗದ ಭಗವದ್ಗೀತಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜ್ಞಾನೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಪರಿಮಳಾ ರಾಜಶೇಖರ ಶೇಟ್ ಎಲ್ಲರನ್ನು ಸ್ವಾಗತಿಸಿದರು.ಸವಿತಾ ಶೇಟ್, ಪ್ರಣಮ್ಯ ರಾಯ್ಕರ್ ನಿರೂಪಿಸಿದರು.ಕಾರ್ಯಕ್ರಮದ ನಡುವೆ ಪ್ರಕಾಶ ರಾಯ್ಕರ ಶ್ರೀ ಕೃಷ್ಣನ ಕುರಿತಾದ ರಸಪ್ರಶ್ನೆಗಳನ್ನು ಕೇಳಿ ಮಹಿಳಾ ಮಂಡಳಿಯಿಂದ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸುನೀಲ ಶೇಟ್, ವಿನಯಾ ಶೇಟ್, ಸಂದೀಪ್ ಶೇಟ್, ರೋಚನ್ ಶೇಟ್, ಹಾಗೂ ದೈವಜ್ಞ ಸಮಾಜದ ತಾಯಂದಿರು, ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.