ಭಟ್ಕಳ – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದ ಹೇಬಳೆ ಪ್ರದೇಶದ ವೆಂಕಟಾಪುರ ನದಿಯ ದಂಡೆಯ ಮೇಲೆ ಗಬ್ಬದ ಹಸುವನ್ನು ಕಡಿದು ಮಾಂಸ ಮಾಡಿ, ಹಸುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿದ್ದ ಆರೋಪಿಯನ್ನು ಎರಡೇ ದಿನದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಗೋವನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಹನೀಫಾಬಾದ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಹವ್ವಾ ಎಂದು ಗುರುತಿಸಲಾಗಿದೆ.ಶನಿವಾರ ರಾತ್ರಿ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರದಲ್ಲಿ ಗರ್ಭಿಣಿ ಗೋವನ್ನು ಹತ್ಯೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಭಟ್ಕಳದಲ್ಲಿಯೂ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದರಿಂದ ನಾಗರಿಕರು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿ ಗಳನ್ನು ಬಂದಿಸುವಂತೆ ಆಗ್ರಹಿಸಿ ಎ. ಸಿ ಗೆ ಮನವಿ ನೀಡಿದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಎಸ್.ಪಿ ಎಂ.ನಾರಾಯಣ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಹೇಶ ಕೆ. ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು.
ಗೋ ಮಾಂಸಕ್ಕಾಗಿ ಗರ್ಭಿಣಿ ಹಸುವನ್ನು ಕಡಿದ ದುರುಳರು ಹೊಟ್ಟೆಯಲ್ಲಿದ್ದ ಕರುವನ್ನು ಬಗೆದು ಬಿಸಾಡಿದ್ದರು. ಭಟ್ಕಳದ ಹೆಬಳೆ ವೆಂಕಟಾಪುರ ನದಿ ಅಂಚಿನಲ್ಲಿ ಗೋಣಿ ಚೀಲದಲ್ಲಿ ಸುತ್ತಿದ ಹಸುವಿನ ಕರು ಪತ್ತೆಯಾಗಿತ್ತು.
ಬೀದಿ ನಾಯಿ ಗೋಣಿ ಚೀಲ ಎಳೆಯುತ್ತಿರುವಾಗ ಆಕಳ ಕರು ಹೊರ ಬಂದಿದೆ. ಹೀಗಾಗಿ ದುರುಳರ ಕೃತ್ಯ ಬಯಲಾಗಿತ್ತು. ನದಿ ಅಂಚಿನಲ್ಲಿ ಕರು ಸಾವನಪ್ಪಿರುವ ಸುದ್ದಿ ತಿಳಿದು ಗುರುವಾರ ಪೊಲೀಸರು ಭೇಟಿ ನೀಡಿದರು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದರು.
ಜನವರಿ ತಿಂಗಳಿನಲ್ಲಿ ಹೊನ್ನಾವರದಲ್ಲಿ ಸಹ ಗರ್ಭಿಣಿ ಹಸುವನ್ನು ದುರುಳರು ಕೊಂದಿದ್ದರು. ಮೇವಿಗೆ ತೆರಳಿದ ಜಾನುವಾರನ್ನು ಕೊಂದು ಮದುವೆ ಊಟಕ್ಕೆ ಮಾಂಸ ಕಳುಹಿಸುವ ತಯಾರಿ ನಡೆಸಿದ್ದರು. ಈ ಪ್ರಕರಣ ರಾಜ್ಯದ ಎಲ್ಲಡೆ ಸುದ್ದಿ ಮಾಡಿದ್ದು, ಪೊಲೀಸರು ಆರೋಪಿತರನ್ನು ಬಂಧಿಸಿದ್ದರು.
ಅದರ ಬೆನ್ನಲ್ಲೆ ಇದೀಗ ಭಟ್ಕಳದಲ್ಲಿ ಮತ್ತೊಂದು ಗೋ ಹತ್ಯೆ ಬೆಳಕಿಗೆ ಬಂದಿತ್ತು.. ಇಲ್ಲಿಯೂ ಗರ್ಭಿಣಿ ಹಸುವನ್ನು ಕೊಂದ ಬಗ್ಗೆ ವ್ಯಾಪಕಆಕ್ರೋಶವ್ಯಕ್ತವಾಗಿತ್ತು.ತಪ್ಪಿತಸ್ಥರನ್ನು ಹುಡುಕಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಜನ ಒತ್ತಾಯಿಸಿದ್ದರು.