ಭಟ್ಕಳ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಭಟ್ಕಳ ಶಹರ ಪೊಲೀಸರು ಬಂಧಿಸಿ, ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತನನ್ನು ಹೆಬಳೆ ನಿವಾಸಿ 24 ವರ್ಷದ ಅಬ್ರಾರ್ ಶೇಖ ಎಂದು ಗುರುತಿಸಲಾಗಿದೆ. ಭಟ್ಕಳ ಶಹರದ ಮುಗ್ಗುಂಕಾಲೋನಿಯ ಮೌಂಟೆನ್ ಗ್ರೌಂಡ್ ಸಮೀಪ ಈ ಕಾರ್ಯಾಚರಣೆ ನಡೆಸಲಾಗಿದೆ.

ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ವೇಳೆ, ಆರೋಪಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಂಗ್ರಹಿಸಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಕಾರ್ಯಾಚರಣೆಯ ವೇಳೆ ಸುಮಾರು 84 ಗ್ರಾಂ ತೂಕದ ಗಾಂಜಾ, ಅಂದಾಜು ₹5,000 ಮೌಲ್ಯದ ಮಾದಕ ವಸ್ತು ಹಾಗೂ ಗಾಂಜಾ ಪ್ಯಾಕಿಂಗ್ಗೆ ಬಳಸಲಾಗುತ್ತಿದ್ದ 12 ಖಾಲಿ ಪ್ಲಾಸ್ಟಿಕ್ ಸ್ಯಾಚೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದಲ್ಲದೆ, ಗಾಂಜಾ ಸಾಗಾಟ ಮತ್ತು ಸಂಗ್ರಹಕ್ಕೆ ಬಳಸಲಾಗುತ್ತಿದ್ದ ಅಂದಾಜು ₹5 ಲಕ್ಷ ಮೌಲ್ಯದ ಬಿಳಿ ಬಣ್ಣದ ಹೊಂಡಾ ಸಿಟಿ ಕಾರನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಪ ನಿರೀಕ್ಷಕ ನವೀನ್ ಎಸ್. ನಾಯ್ಕ್ ಅವರ ದೂರಿನ ಮೇರೆಗೆ ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಸೋಮರಾಜ ಟಿ. ರಾಠೋಡ ನಡೆಸುತ್ತಿದ್ದಾರೆ.
