ಶ್ರೀ ಶ್ರೀ ಶ್ರೀ ಪರಮ ಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 12ನೇ ದಿನದ
ಚಾತುರ್ಮಾಸ್ಯ ವ್ರತಾಚಾರಣೆ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕು ನಾಮಧಾರಿ ಸಂಘ ಮತ್ತು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಶ್ರೀಗಳ ಪಾದ ಪೂಜೆ
ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾಗಿರುವ ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 12ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕು ನಾಮಧಾರಿ ಸಂಘ ಮತ್ತು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಶ್ರೀಗಳ ಪಾದ ಪೂಜೆ ನೆರವೇರಿತು.
ಭಟ್ಕಳದ ಕರಿಕಲ್ ಶ್ರೀಮಠಕ್ಕೆ ಆಗಮಿಸಿದ ಕುಮಟಾ ತಾಲೂಕು ನಾಮಧಾರಿ ಸಮಾಜದ ಬಾಂಧವರು ಚಾತುರ್ಮಾಸ್ಯ ವ್ರತಾಚರಣೆಯ ಸೇವೆಗಾಗಿ ತಂದಿದ್ದ ಧನ-ಧಾನ್ಯಗಳನ್ನು ಅಚ್ಚುಕಟ್ಟಾಗಿ ಮೆರವಣಿಗೆಯ ಮೂಲಕ ತಂದು ಶ್ರೀಮಠಕ್ಕೆ ಅರ್ಪಿಸಿದರು. ಚಾತುರ್ಮಾಸ್ಯ ಕಾರ್ಯಕ್ರಮದ ಸೇವಾ ಕೈಂಕರ್ಯಗಳಲ್ಲಿ ಪಾಲ್ಗೊಂಡ ಭಕ್ತರು ಗುರು ಭಕ್ತಿ ಮೆರೆದರು. ವೇದಿಕೆಯಲ್ಲಿ ಕುಮಟಾದ ರಾಘವೇಂದ್ರ ಪಟಗಾರ ನೇತೃತ್ವದ ಭಜನಾ ತಂಡದ ಗಾಯನ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತು. ಬಳಿಕ ವೇದಿಕೆಗೆ ಆಗಮಿಸಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದ ಪೂಜೆಯನ್ನು ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ ಅವರು ದಂಪತಿ ಸಮೇತ ನೆರವೇರಿಸಿದರು. ಈ ಪಾದ ಪೂಜೆಗೆ ಕುಮಟಾ ತಾಲೂಕು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಎಚ್ ಆರ್ ನಾಯ್ಕ ಕೋನಳ್ಳಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ವಕೀಲ ಆರ್ ಜಿ ನಾಯ್ಕ, ಮಂಜುನಾಥ ಎಲ್ ನಾಯ್ಕ, ಆರ್ ಎಚ್ ನಾಯ್ಕ ಬಾಡ, ನಾಮಧಾರಿ ಸಂಘದ ನಿರ್ದೇಶಕರು ಸೇರಿದಂತೆ ನಾಮಧಾರಿ ಸಮಾಜದ ಮುಖಂಡರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳ ದರ್ಶನ ಪಡೆಯಲು ಬಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಕಾಂಗ್ರೆಸ್ ಮುಖಂಡರಾದ ಸತೀಶ್ ನಾಯ್ಕ, ಪ್ರದೀಪ ನಾಯಕ, ಹೊನ್ನಪ್ಪ ನಾಯಕ, ಭಾಸ್ಕರ್ ಪಟಗಾರ ಇತರರು ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು. ಶಿರಸಿ ಶಾಸಕ ಭೀಮಣ್ಣ ನಾಯ್ಕರು ಶ್ರೀಮಠಕ್ಕೆ ಆಗಮಿಸಿ, ಶ್ರೀಗಳ ದರ್ಶನ ಪಡೆದು ಫಲಮಂತ್ರಾಕ್ಷತೆ ಸ್ವೀಕರಿಸಿದರು.
ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು ಜಾತುರ್ಮಾಸ್ಯದ ಮಹತ್ವ ತಿಳಿಸಿದರು. ಮನುಷ್ಯನಾದವನು ತನ್ನ ಧರ್ಮವನ್ನು ಪಾಲಿಸಬೇಕು. ಮಠಮಾನ್ಯವನ್ನು ಬೆಳೆಸುವ ಕಾರ್ಯ ಮಾಡುವ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಧಾರ್ಮಿಕ ಕಾರ್ಯವನ್ನು ಹಿಂದೆ ಮೇಲ್ವರ್ಗದವರಷ್ಟೆ ಮಾಡುತ್ತಿದ್ದರು. ಆದರೆ ಈಗ ಹಿಂದುಳಿದ ವರ್ಗದವರು ಕೂಡ ಧಾರ್ಮಿಕ ಕಾರ್ಯ ಕೈಗೊಳ್ಳುವ ಮೂಲಕ ಅವರಿಗೂ ಸಮಾಜದಲ್ಲಿ ಶಿಸ್ತು, ಗೌರವ ಪ್ರಾಪ್ತವಾಗುವಂತಾಗಿದೆ. ಮನಸ್ಸಿನ ತೀವ್ರತೆಯ ಮೇಲೆ ದೇವರ ಕೃಪೆಗೆ ಪಾತ್ರವಾಗುತ್ತದೆ. ಹಾಗಾಗಿ ಸತ್ಸಂಗ ಮಾಡಬೇಕು. ತಾನು ಶ್ರೇಷ್ಠ ಎಂಬ ಮೋಹ ಬಿಟ್ಟರೆ ಮಾತ್ರ ಭಕ್ತಿಯ ಮಹತ್ವ ತಿಳಿಯುತ್ತದೆ. ಜನರು ಸಂಸ್ಕಾರವನ್ನು ಪಾಲಿಸಬೇಕೆಂಬ ಸದುದ್ದೇಶದಿಂದಲೇ ಈ ಚಾತುರ್ಮಾಸ್ಯ ಮಾಡುತ್ತಿದ್ದೇವೆ ಎಂದು ಶ್ರೀಗಳು ನುಡಿದರು.
ಬಳಿಕ ಎಲ್ಲ ಭಕ್ತರಿಗೆ ಶ್ರೀಗಳು ಮಂತ್ರಾಕ್ಷತೆ ವಿತರಿಸಿ, ಹರಸಿದರು. ಬಳಿಕ ನಡೆದ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು. ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಪ್ರಮುಖರಾದ ರಾಘವೇಂದ್ರ ನಾಯ್ಕ, ಸುರೇಶ ನಾಯ್ಕ ಹೆರವಟ್ಟಾ, ಪ್ರಶಾಂತ ನಾಯ್ಕ, ಸಂತೋಷ ನಾಯ್ಕ, ಕುಮಟಾ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ, ಮೂರೂರು ಗ್ರಾಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ, ಕೂಜಳ್ಳಿ ಗ್ರಾಪಂ ಉಪಾಧ್ಯಕ್ಷ ವೈಭವ ನಾಯ್ಕ, ತೆಂಗು ಮಂಡಳಿಯ ಅಧ್ಯಕ್ಷ ಗಣಪತಿ ನಾಯ್ಕ, ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಎಂ ಟಿ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.