ಉಡುಪಿ: ಇಲ್ಲಿನ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ಮೀನುಗಾರಿಕೆ ಕಾರ್ಮಿಕರಾಗಿ ಬಂದಿದ್ದ ಏಳು ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಕೆಲಸಕ್ಕೆಂದು ಬಂದಿದ್ದ ಇವರ ಬಗ್ಗೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ ಮಹಮ್ಮದ್ ಮಾಣಿಕ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರಿಗೆ ಮಾಹಿತಿ ದೊರಕಿತ್ತು. ಬಾಂಗ್ಲಾದೇಶದ ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿದೆ.ಈತನ ವಿಚಾರಣೆ ವೇಳೆ ಹಲವರು ಮಲ್ಪೆಯಲ್ಲಿರುವುದು ಪತ್ತೆಯಾಗಿದೆ.
ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಬಂಧಿತರು. ಇವರು ನಕಲಿ ದಾಖಲಾತಿ ಸೃಷ್ಟಿಸಿ ಮಲ್ಪೆಯಲ್ಲಿ ತಂಗಿದ್ದರು.ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಸಿಕ್ಕಿಂನ ಕಾಜೋಲ್ ಈ ಎಲ್ಲರಿಗೂ ನಕಲಿ ಆಧಾರ್ ಕಾರ್ಡ್ ತಯಾರಿಸಿಕೊಟ್ಟಿದ್ದು, ಹಕೀಂ ಅಲಿ ಈ ಎಲ್ಲರನ್ನೂ ಭಾರತಕ್ಕೆ ಕರೆತಂದಿದ್ದಾನೆ.ಇವರನ್ನು ವಶಕ್ಕೆ ಪಡೆದಿರುವ ಮಲ್ಪೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.