ಹುಬ್ಬಳ್ಳಿ: ನಗರಕ್ಕೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹುಬ್ಬಳ್ಳಿಯ (Hubballi) ಖಾಸಗಿ ಹೋಟೆಲ್ನಿಂದ ಹೊರಬರುತ್ತಿದ್ದಂತೆ `ಮುಂದಿನ ಸಿಎಂ ಸಿದ್ದರಾಮಯ್ಯ’ (Next CM Siddaramaiah) ಘೋಷಣೆಗಳು ಮೊಳಗಿದವು.ಸಿದ್ದರಾಮಯ್ಯ ಅಭಿಮಾನಿ ಸಂಘದ ಗಿರೀಶ್ ಗದಿಗೆಪ್ಪಗೌಡ `ಮುಂದಿನ ಸಿಎಂ ಸಿದ್ದರಾಮಯ್ಯ, ಹೌದೋ ಹುಲಿಯಾ.. ಮುಂದಿನ ಸಿಎಂ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಗದರಿಸಿ ಸುಮ್ಮನಿರುವಂತೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ (BJP) ಸಂಕಲ್ಪ ಯಾತ್ರೆ ವಿಫಲವಾಗಿದೆ. ಜನರು ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ಗೆ (Congress) ಅಧಿಕಾರ ಕೊಡಲು ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಜನ ಸೇರುತ್ತಿಲ್ಲ. ಆದರೆ ಜನರನ್ನು ಹಿಡಿದಿಡಲು ಕಾರ್ಯಕ್ರಮದ ಮುಂಭಾಗದ ಗೇಟ್ ಗಳನ್ನಿಟ್ಟು ಬೀಗ ಹಾಕಿ ಕಟ್ಟಿಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.ಮೀಸಲಾತಿ ವಿಚಾರವಾಗಿ ಮಾತನಾಡಿದ ಸಿದ್ದು, ನನಗೆ ಗೊತ್ತಿರುವಂತೆ ಸಂವಿಧಾನದ (Constitution of India) ಆರ್ಟಿಕಲ್ 15 ಮತ್ತು 16ರ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS) ಮೀಸಲಾತಿ (Reservation) ಕಲ್ಪಿಸಲು ಅವಕಾಶವಿಲ್ಲ. ಸಾಮಾಜಿಕವಾಗಿ ಹಿಂದುಳಿದ ಮತ್ತು ಅಸ್ಪೃಶ್ಯತೆ ಹಾಗೂ ಅಸಮಾನತೆ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮೂದಾಯಗಳಿಗೆ ಮಾತ್ರ ಮೀಸಲು ನೀಡಬಹುದು ಎಂದು ತಿಳಿಸಿದ್ದಾರೆ.ಸತೀಶ್ ಜಾರಕಿಹೊಳಿ (Satish Jarkiholi) ನೀಡಿದ `ಹಿಂದೂ’ ಭಾರತೀಯ ಪದವೇ ಅಲ್ಲ ಎಂಬ ಹೇಳಿಕೆಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ ಅದೇ ನಮ್ಮ ನಿಲುವು ಎಂದು ಹೇಳಿದ ಸಿದ್ದರಾಮಯ್ಯ, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡೋದು ತಪ್ಪಲ್ಲ, ಆದರೆ ಸರ್ಕಾರ ಜಯಂತಿಯನ್ನು ನಿಷೇಧ ಮಾಡಿದೆ. ನಗರಪಾಲಿಕೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದು ಹೇಳಿದ್ದಾರೆ.