ಭಟ್ಕಳ: ಅಳ್ವೇಕೋಡಿ ನದಿಯಲ್ಲಿ ರವಿವಾರ ಸಂಭವಿಸಿದ ಹೃದಯವಿದ್ರಾವಕ ದುರಂತದ ನಡುವೆ ಯುವಕನೊಬ್ಬ ತೋರಿದ ಸಾಹಸ ಮತ್ತು ಮಾನವೀಯತೆ ಇಡೀ ಭಟ್ಕಳ ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತೆಂಗಿನಗುಂಡಿ–ಹೆಬಳೆ ಗ್ರಾಮದ ಬುದವಂತರ ಮನೆ ನಿವಾಸಿ ಗಿರೀಶ್ ದಿನಕರ ಮೊಗೇರ ಅವರು ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ಇಬ್ಬರ ಪ್ರಾಣ ಉಳಿಸುವ ಮೂಲಕ ಮಾನವೀಯತೆಯ ಮೆರಗು ತೋರಿದ್ದಾರೆ.
ದುರ್ಘಟನೆ ಸಂಭವಿಸುತ್ತಿರುವುದನ್ನು ಮನೆಯ ಸಮೀಪದಿಂದಲೇ ಗಮನಿಸಿದ ಗಿರೀಶ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ದೋಣಿಯೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು. ನೀರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ ಅವರು ಇಬ್ಬರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.
ಇದೇ ವೇಳೆ, ದುರ್ಘಟನೆಯಲ್ಲಿ ಮೃತಪಟ್ಟ ಆರು ಮಂದಿಯ ಮೃತದೇಹಗಳನ್ನು ಗೌರವಯುತವಾಗಿ ದಡಕ್ಕೆ ತಲುಪಿಸುವ ಕಾರ್ಯದಲ್ಲಿಯೂ ಅವರು ಮಹತ್ವದ ಪಾತ್ರವಹಿಸಿದರು. ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಸ್ಥಳೀಯರು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರವಿವಾರ ಸಂಭವಿಸಿದ ಈ ಅನಿರೀಕ್ಷಿತ ಘಟನೆ ಭಟ್ಕಳ ತಾಲೂಕಿನ ಶಿರಾಲಿ, ಅಳ್ವೇಕೋಡಿ, ಹಾಗೂ ಹೆಬಳೆ ಭಾಗದ ಜನರಲ್ಲಿ ಶೋಕದ ವಾತಾವರಣ ಮೂಡಿಸಿದೆ. ದೂರದ ಊರುಗಳಲ್ಲಿ ಮಾತ್ರ ಕೇಳಿಬರುತ್ತಿದ್ದ ಇಂತಹ ದುರಂತವು ತಮ್ಮ ಕಣ್ಣೆದುರೇ ನಡೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ನದಿತೀರ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಮುಂಜಾಗ್ರತಾ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ಮನದಟ್ಟುಗೊಳಿಸಿದೆ.ದುರ್ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಸಾರ್ವಜನಿಕರು ಪ್ರಾರ್ಥಿಸಿದ್ದಾರೆ.
