ಮಂಡ್ಯದಲ್ಲಿ ಬಿಜೆಪಿ ಮಿಷನ್-5 ಪ್ಲಾನ್ – ಜೆಡಿಎಸ್ನ ತೆನೆ ಮರೆತು, ಕಾಂಗ್ರೆಸ್ನ ಕೈ ಬಿಟ್ಟು, ಕಮಲ ಹಿಡಿತಾರಾ ಜನ?
ಮಂಡ್ಯ: ಬಿಜೆಪಿಗೆ (BJP) ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರಬೇಕು ಅಂದ್ರೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು, ಅದ್ರಲ್ಲೂ ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಅಧಿಕ ಕ್ಷೇತ್ರಗಳಲ್ಲಿ ಗೆಲವು ಪಡೆದ್ರೆ ಅಷ್ಟೇ ಬಿಜೆಪಿಗೆ ಮುಂದಿನ ಬಾರಿ ಸರ್ಕಾರ ರಚನೆಗೆ ಸುಲಭದ ಅವಕಾಶ. ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಮಿಷನ್- 5 ಪ್ಲಾನ್ ಮಾಡಿದೆ.ರಾಜಕೀಯ ಲೆಕ್ಕಾಚಾರಕ್ಕೆ ಬಂದ್ರೆ ಮಂಡ್ಯ ಗೆದ್ದರೆ ಇಂಡಿಯಾ ಗೆದ್ದ ಹಾಗೆ ಎಂಬ ಮಾತು ಇದೆ. ಹೀಗಾಗಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯನ್ನು ಗೆದ್ದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ವಿಧಾನಸಭಾ ಚುನಾವಣೆಗೆ (Karnataka Assembly Election) ಇನ್ನೂ ಕೇವಲ ನಾಲ್ಕು ತಿಂಗಳು ಅಷ್ಟೇ ಬಾಕಿ ಇದೆ. ಹೀಗಾಗಿ ಈಗಿನಿಂದಲೇ ಬಿಜೆಪಿ ಮಂಡ್ಯದಲ್ಲಿ ರಾಜಕೀಯ ರಣತಂತ್ರ ಹೆಣೆಯುತ್ತಿದೆ. ಮಂಡ್ಯದ 7 ಕ್ಷೇತ್ರಗಳ ಪೈಕಿ ಬಿಜೆಪಿ 5 ಕ್ಷೇತ್ರಗಳ ಮೇಲೆ ಟಾರ್ಗೆಟ್ ಇಟ್ಟಿದ್ದು, ಇದ್ರಲ್ಲಿ 3 ಕ್ಷೇತ್ರದಲ್ಲಿ ಆದ್ರು ಗೆದ್ದೇ ಗೆಲ್ಲಬೇಕೆಂದು ಪ್ಲಾನ್ ಮಾಡಿಕೊಂಡಿದೆ.
ಇಷ್ಟು ವರ್ಷಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೇಳಲು ಯಾರು ಮುಂದೆ ಬರುತ್ತಿರಲಿಲ್ಲ. ಆದ್ರೆ ಕೆಆರ್ಪೇಟೆಯಲ್ಲಿ ನಾರಾಯಣಗೌಡ ಗೆಲವು ಬಳಿಕ ಮಂಡ್ಯದ 7 ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ಮುಗಿಬಿದ್ದಿದ್ದಾರೆ. ಬಿಜೆಪಿ ನಾಯಕರು ಮಂಡ್ಯದಲ್ಲಿ ಗೇಮ್ ಪ್ಲಾನ್ ಮಾಡಿದ್ದು, ಕೆಆರ್ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮಂಡ್ಯ, ಮೇಲುಕೋಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕೆಆರ್ಪೇಟೆಯಿಂದ ಗೆಲುವು ಸಾಧಿಸಿ ಮಂತ್ರಿಯಾಗಿರುವ ನಾರಾಯಣಗೌಡ ಮುಂದಿನ ಬಾರಿಯೂ ಕೆಆರ್ಪೇಟೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ. ಮಳವಳ್ಳಿಯಲ್ಲಿ 2013ರಲ್ಲಿ ಕೆಜೆಪಿ ಪಕ್ಷದಿಂದ 26,397 ಮತಗಳನ್ನು ಪಡೆದುಕೊಂಡಿದ್ದ ಬೆಂಗಳೂರಿನ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ಅವರನ್ನು ಕಣಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸಂಸದೆ ಸುಮಲತಾ ಅಂಬರೀಶ್ ಆಪ್ತ ಇಂಡುವಾಳು ಸಚ್ಚಿದಾನಂದ ಅವರನ್ನು ಕಣಕ್ಕಿಳಿಸಲು ಈಗಾಗಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಮಂಡ್ಯದಿಂದ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಉಮೇಶ್ ಅವರನ್ನು ನಿಲ್ಲಿಸಲು ಸಜ್ಜು ಮಾಡಿಕೊಳ್ಳಲಾಗಿದೆ. ಮೇಲುಕೋಟೆಯಲ್ಲಿ ಡಾ.ಇಂದ್ರೇಶ್ರನ್ನು ಕಣಕ್ಕೆ ಇಳಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ (Congress) ಮಾಸ್ಟರ್ ಸ್ಟ್ರೋಕ್ ನೀಡಲು ಬಿಜೆಪಿ ಸಜ್ಜಾಗಿದೆ.ಒಟ್ಟಾರೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳನ್ನು ಕಬ್ಜಾ ಮಾಡಲು ಪ್ಲಾನ್ ಮಾಡಿರುವ ಬಿಜೆಪಿ 3 ಕ್ಷೇತ್ರದಲ್ಲಿ ಆದ್ರು ಗೆಲುವು ಪಡೆಯುವ ನಿರೀಕ್ಷೆಯಲ್ಲಿ ಇದೆ. ಆದ್ರೆ ಸಕ್ಕರೆ ನಾಡಿನ ಜನ ಜೆಡಿಎಸ್ನ ತೆನೆ ಮರೆತು, ಕಾಂಗ್ರೆಸ್ನ ಕೈ ಬಿಟ್ಟು ಬಿಜೆಪಿಯ ಕಮಲವನ್ನು ಹಿಡಿಯುತ್ತಾರಾ ಎಂದು ಕಾದುನೋಡಬೇಕಿದೆ.