ರಾಜ್ಯ ಬಿಜೆಪಿ ಸರ್ಕಾರದಿಂದ ಮಿತಿ ಮೀರಿದ ಭ್ರಷ್ಟಾಚಾರ, ಅಕ್ರಮ : ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರಿಗೆ ಎಸ್. ಡಿ. ಪಿ. ಐ ಆಗ್ರಹ.
* ಮುಖ್ಯಮಂತ್ರಿಗಳ ಕಚೇರಿಯಿಂದ ಬಿಬಿಎಂಪಿ ಕಡತ ನಾಪತ್ತೆ.
ಭಟ್ಕಳ- ಬಿಬಿಎಂಪಿ ಕಡತಗಳು ಮುಖ್ಯಮಂತ್ರಿಗಳ ಕಚೇರಿಯಿಂದಲೇ ನಾಪತ್ತೆಯಾಗಿರುವುದು ಈ ಸರ್ಕಾರ ತನ್ನ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿಡಲು ಎಷ್ಟು ನೀಚ ಮಟ್ಟಕ್ಕೆ ಹೋಗಬಹುದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಭಟ್ಕಳದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ಜಾಹೀರಾತು ನಿಯಮಗಳ ಕುರಿತಾದ ಕಡತ ಮುಖ್ಯಮಂತ್ರಿ ಕಚೇರಿಗೆ ಪರಿಶೀಲನೆಗಾಗಿ ಬಂದಿದೆ. ಆದರೆ ಅದು ಅಲ್ಲಿಂದ ಕಾಣೆಯಾಗಿದೆ. ಈ ಬಗ್ಗೆ ಇಲಾಖೆಯು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಅಷ್ಟೆಲ್ಲ ಭದ್ರತೆ ಇರುವ ಮುಖ್ಯಮಂತ್ರಿಗಳ ಕಚೇರಿಯಿಂದ ಕಡತಗಳು ನಾಪತ್ತೆಯಾಗಲು ಸಾಧ್ಯವಿಲ್ಲ 40% ಭ್ರಷ್ಟಾಚಾರದಲ್ಲಿ ತೊಡಗಿರುವ ಈ ಭ್ರಷ್ಟ ಸರ್ಕಾರದಲ್ಲಿ ಫೈಲ್ ಗಳು ನಾಪತ್ತೆಯಾಗಿವೆ ಎಂದರೆ ಇದು ಯಾವುದೋ ದೊಡ್ಡ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಡುವ ಪ್ರಯತ್ನವೇ ಇರಬೇಕು ಎಂದು ಅಬ್ದುಲ್ ಮಜೀದ್ ಅವರು ಅನುಮಾನ ವ್ಯಕ್ತಪಡಿಸಿದರು.
*ಮತದಾರರ ಪಟ್ಟಿಯಲ್ಲಿ ಅಕ್ರಮ. ಲಕ್ಷಾಂತರ ಮತದಾರರ ಹೆಸರು ನಾಪತ್ತೆ.
2023ರ ವಿಧಾನಸಭೆ ಚುನಾವಣೆ ಐದಾರು ತಿಂಗಳಲ್ಲಿ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಸಮೀಕ್ಷೆಗಳ ನೆಪದಲ್ಲಿ ಮತದಾರರ ಖಾಸಗಿ ಮಾಹಿತಿ ಕದ್ದು ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಮಾಯ ಮಾಡಲಾಗಿದೆ. ಬೆಂಗಳೂರು ಒಂದರಲ್ಲೇ ಸುಮಾರು ಅರೂವರೆ ಲಕ್ಷ ಮತದಾರರ ಹೆಸರುಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಇದರಲ್ಲಿ ಚಿಲುಮೆ ಎಂಬ ಸಂಸ್ಥೆ ದೊಡ್ಡ ಮಟ್ಟದ ಫ್ರಾಡ್ ಮಾಡಿದೆ. ಈ ಸಂಸ್ಥೆಯ ಜೊತೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಅಶ್ವತ್ ನಾರಾಯಣ ಅವರು ಹೆಸರು ಕೇಳಿ ಬಂದಿದೆ. ಇಷ್ಟು ದೊಡ್ಡ ಮಟ್ಟದ ಹಗರಣ ಸರ್ಕಾರದ ಸಹಕಾರವಿಲ್ಲದೆ ನಡೆಯಲು ಸಾಧ್ಯವೇ ಇಲ್ಲ ಎಂದು ಮಜೀದ್ ಅವರು ತಿಳಿಸಿದರು. ಈ ಸರ್ಕಾರವನ್ನು ಜನರು ಕಿತ್ತೆಸೆಯುವುದು ನಿಶ್ಚಯ. ಈ ಭಯದಲ್ಲಿ ಬೊಮ್ಮಾಯಿ ಸರ್ಕಾರ ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ ಮಾಡುವ ಮೂಲಕ ಅಕ್ರಮವಾಗಿ ಚುನಾವಣೆ ಗೆಲ್ಲುಲು ತಂತ್ರ ರೂಪಿಸಿದೆ ಎಂದು ಮಾಜೀದ್ ಅವರು ಆರೋಪಿಸಿದ್ದರು.
* ಸೂರತ್ಕಲ್ ಟೋಲ್ ಗೇಟ್ ತೆರವು ಎಂಬ ನಾಟಕ.
ಸುಮಾರು ಏಳು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ನಲ್ಲಿ ಅಕ್ರಮವಾಗಿ ಟೋಲ್ ಗೇಟ್ ನಿರ್ಮಿಸಿ ಸುಮಾರು 400 ಕೋಟಿಗೂ ಹೆಚ್ಚು ಟೋಲ್ ವಸೂಲಿ ಮಾಡಲಾಗಿದೆ. ಇದರ ವಿರುದ್ಧ ಅಲ್ಲಿನ ಜನ ಅಂದಿನಿಂದಲೂ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅಷ್ಟೆಲ್ಲ ಹೋರಾಟದ ನಂತರ ವಾರದ ಹಿಂದೆ ಇಲ್ಲಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ ಸೂರತ್ಕಲ್ ಟೋಲ್ ಬಂದಾಗಲಿದೆ ಎಂದು ಹೇಳಿದರು. ಜೊತೆಗೆ ಅದಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನ ಮಂತ್ರಿ ಮೋದಿಯವರಿಗೆ ಧನ್ಯವಾದಗಳು ಅರ್ಪಿಸಿದ್ದರು. ಈಗ ಅದೊಂದು ಮೋಸ ಎಂದು ನಮಗೆಲ್ಲರಿಗೂ ತಿಳಿದು ಬಂದಿದೆ. ಡಿಸೆಂಬರ್ ಒಂದರಿಂದ ಸೂರತ್ಕಲ್ ಟೋಲ್ ಬಂದಾಗುತ್ತೆ ಸರಿ, ಆದರೆ ಅದೇ ತೆರಿಗೆಯನ್ನು ಅಲ್ಲಿಂದ 17 km ದೂರ ಇರುವ ಹೆಜಮಾಡಿಯಲ್ಲಿ ಪಡೆಯಲಿದ್ದಾರೆ. ಹೆಜಮಾಡಿ ಟೋಲ್ ತೆರಿಗೆಯನ್ನು ಹೆಚ್ಚಿಸಿ ಜನರನ್ನು ವಂಚಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಈವರೆಗೆ ಹೆಜಮಾಡಿಯಲ್ಲಿ ಮಂಗಳೂರಿನ ನೋಂದಾಯಿತ ವಾಹನಗಳಿಗೆ ಟೋಲ್ ಇರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ ಈಗ ಆ ವಿನಾಯತಿಯನ್ನು ತೆಗೆದುಹಾಕಲಾಗಿದೆ. ಇದೊಂದು ಹಗಲು ದರೋಡೆ ಎಂದು ಮಜೀದ್ ಅವರು ಸರ್ಕಾರ ಈ ನಡೆಯನ್ನು ಟೀಕಿಸಿದರು.
* ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ.
ಧರ್ಮ ದ್ವೇಷದ ಮೂಲಕ ಅಧಿಕಾರದಲ್ಲಿ ಉಳಿಯಲು ಹವಣಿಸುತ್ತಿರುವ ರಾಜ್ಯ ಸರ್ಕಾರ ಹಿಂದುತ್ವದ ಹೆಸರಿನಲ್ಲಿ ಕೆಲವು ರೌಡಿ ಗುಂಪುಗಳನ್ನು ಚೂ ಬಿಟ್ಟಿದೆ. ಆ ಸಮಾಜಘಾತುಕ ಗುಂಪುಗಳು ದಿನಬೆಳಗಾದರೆ ಒಂದಲ್ಲ ಒಂದು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೋಮುವಾದದ ಕೃತ್ಯಗಳನ್ನು ಮಾಡುತ್ತಿರುತ್ತವೆ. ಅಂತಹದ್ದೇ ಒಂದು ಕೃತ್ಯ ದೇವಸ್ಥಾನಗಳ ಆವರಣದಲ್ಲಿ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂಬ ಗುಂಡಾಗಿರಿ. ಹೆಸರಿಗೆ ಹಿಂದೂಯೇತರ ಎಂದಿದ್ದರು, ಅದು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮಾಡಿರುವ ಕೃತ್ಯ. ಇಂತಹ ಸಂವಿಧಾನ ಬಾಹಿರ ಕಾರ್ಯಗಳಿಗೆ ಸಂಘ ಪರಿವಾರದ ಗುಂಡಾಪಡೆಗಳು ಬಹಿರಂಗವಾಗಿ ಬ್ಯಾನರ್ ಹಾಕುವುದು ಗಮನಿಸಿದಾಗ ಇದು ಬಿಜೆಪಿ ಸರ್ಕಾರದ ಪ್ರಾಯೋಜಿತ ಕಾರ್ಯಾ ಎಂದು ಸ್ಪಷ್ಟವಾಗುತ್ತದೆ. ಮುಜರಾಯಿ ಇಲಾಖೆಗೆ ಸೇರಿದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ರೀತಿಯ ಬ್ಯಾನರ್ ಬಂದಿದೆ. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನದ ಆವರಣದಲ್ಲಿ ಈ ರೀತಿ ಭೇದ ಮಾಡುವುದು ಸಂವಿಧಾನ ವಿರೋಧಿ ನಡೆ ಎಂದು ಮಜೀದ್ ಅವರು ಹೇಳಿದರು.
* ಮಣಿಪಾಲ ಕಾಲೇಜಿನಲ್ಲಿ ಮುಸ್ಲಿಂ ದ್ವೇಷ.
ಮಣಿಪಾಲ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮುಸ್ಲಿಂ ವಿದ್ಯಾರ್ಥಿಯನ್ನು ಉಗ್ರವಾದಿ ಎಂದು ಕರೆದಿದ್ದಾರೆ. ಈ ಬಗ್ಗೆ ವಿಡಿಯೋ ಬಹಿರಂಗವಾಗಿದ್ದು, ಪ್ರಾಧ್ಯಾಪಕರ ಇಸ್ಲಾಮಾಫೋಬಿಯಾ ವಿರುದ್ಧ ವಿದ್ಯಾರ್ಥಿ ಧ್ವನಿ ಎತ್ತಿರುವುದು ಕಂಡು ಬಂದಿದೆ. ಕೋಮು ದ್ವೇಷ ಬಿತ್ತುವ ಮಾಧ್ಯಮಗಳು ಮತ್ತು ಕೋಮು ದ್ವೇಷವನ್ನೇ ಉಸಿರಾಡುತ್ತಾ ಆ ಮೂಲಕ ಚುನಾವಣೆಗಳನ್ನು ಗೆಲ್ಲುಲು ಹವಣಿಸುವ ಫ್ಯಾಶಿಸ್ಟ್ ಬಿಜೆಪಿಯೇ ವಿದ್ಯಾಸಂಸ್ಥೆಗಳಲ್ಲಿ ಈ ರೀತಿಯ ಮುಸ್ಲಿಂ ದ್ವೇಷ ಹರಡಲು ಕಾರಣ ಎಂದು ಮಜೀದ್ ಅವರು ಹೇಳಿದರು. ಜೊತೆಗೆ ಇಂತಹ ಮನಸ್ಥಿತಿಯ ಪ್ರಾಧ್ಯಾಪಕರನ್ನು ತಕ್ಷಣದಿಂದಲೇ ಕಾಲೇಜು ಮಂಡಳಿ ಆ ಹುದ್ದೆಯಿಂದ ವಜಾ ಮಾಡಬೇಕು ಮತ್ತು ಸರ್ಕಾರ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ನೆರೆಯ ಸಂದರ್ಭದಲ್ಲಿ ಭಟ್ಕಳ ನಗರದಲ್ಲಿ ಬಹಳಷ್ಟು ನಾಶ ನಷ್ಟಗಳು ಸಂಭವಿಸಿದ್ದು ಅತ್ಯಲ್ಪ ಪರಿಹಾರವನ್ನು ಮಾತ್ರ ನೀಡಲಾಗಿದೆ. ಬಹಳಷ್ಟು ಅಂಗಡಿ ಮುಂಗಟುಗಳಿಗೆ ಯಾವುದೇ ಪರಿಹಾರ ಇನ್ನೂ ನೀಡಲಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಸೂಕ್ತ ಪರಿಹಾರ ನೀಡಲು ಪಕ್ಷ ಆಗ್ರಹಿಸುತ್ತದೆ
ರಾಷ್ಟ್ರೀಯ ಹೆದ್ದಾರಿಯು ಭಟ್ಕಳ ನಗರ ದಿಂದಲೇ ಹಾದುಹೋಗುತ್ತಿದ್ದು,ಬಹಳ ಮುಖ್ಯವಾಗಿ ಬೆಳಿಗ್ಗೆ ಹಾಗೂ ಸಾಯಂಕಾಲ ಸಂದರ್ಭದಲ್ಲಿ ಶಾಲಾ ಮಕ್ಕಳ ವಾಹನಗಳು ಅತಿ ಹೆಚ್ಚು ಇರುವ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಾರ್ವಜನಿಕರ ಬಹು ವರ್ಷಗಳ ಬೇಡಿಕೆ ಇರುವ ಮೇಲು ಸೇತುವೆ ನಿರ್ಮಾಣ ಮಾಡಲು ಸರಕಾರ ಮುಂದಿನ ಬಜೆಟ್ಟಿನಲ್ಲಿ ಹಣಕಾಸು ಮೀಸಲಿಡಬೇಕಾಗಿ ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.
ಉತ್ತರ ಕನ್ನಡದ ಜನರ ಬಹಳ ವರ್ಷಗಳ ಬೇಡಿಕೆಯಾಗಿರುವ ಮೆಡಿಕಲ್ ಕಾಲೇಜ್ ಮಾಡಲು ಸಾಧ್ಯವಾಗದ ಇಲ್ಲಿ ಐದು ಬಾರಿ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ಯವರು ಬರೇ ಹಿಂದೂ ಮುಸಲ್ಮಾನ ರಾಜ್ಯಕೀಯ ಮಾತ್ರ ಮಾಡದೆ ಅಭಿವೃದ್ಧಿ ಕಡೆ ಗಮನ ಹರಿಸಬೇಕೆಂದು ಪಕ್ಷ ಆಗ್ರಹಿಸುತ್ತದೆ.